ಶಿವರಾಜ್ ಕೊಲೆಗೆ ದುಷ್ಪ್ರೇರಣೆ ಆರೋಪ: ಆರೋಪಿಗಳ ಬಂಧನ
ಮಂಗಳೂರು, ಫೆ. 19: ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಜ.22ರಂದು ನಡೆದ ಶಿವರಾಜ್ ಕರ್ಕೇರ ಕೊಲೆ ಪ್ರಕರಣದಲ್ಲಿ ಕೊಲೆಗೆ ದುಷ್ಪ್ರೇರಣೆ ನೀಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಸೋಮವಾರ ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳ ತಂಡ ಬಂಧಿಸಿದೆ.
ಬೆಂಗ್ರೆ ಗ್ರಾಮದ ವಿಕ್ರಮ್ ಯಾನೆ ವಿಕ್ರಮ್ ಅಮೀನ್ ಯಾನೆ ವಿಕ್ಕಿ (25), ಕುದ್ರೋಳಿ ಬೆಂಗರೆಯ ಅಜಯ್ (20) ಮತ್ತು ಬಿಜೈಯ ಸುಮನ್ ಯಾನೆ ಸುಮನ್ ಕೋಟ್ಯಾನ್ ಯಾನೆ ಬೊಗ್ಗು ಸುಮನ್ ( 19) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಟಿ. ಆರ್.ಸುರೇ ಅವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಮ್, ಪಿ.ಎಸ್.ಐ ಎಂ.ಎನ್.ಉಮೇಶ್ ಕುಮಾರ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿ ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.