ತಲಪಾಡಿ: ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ - ನಾಲ್ವರ ಬಂಧನ
ಮಂಗಳೂರು, ಫೆ. 19: ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಉಳ್ಳಾಲ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ನಾರ್ಲ ಪಡೀಲ್ನ ಜೀವನ್ ಡಿಸೋಜ (23), ಮೈಕಲ್ ಯಾನೆ ಕಿಶೋರ್ (20), ಮಂಜೇಶ್ವರ ಕುಂಜತ್ತೂರಿನ ಶೋಭಿತ್ (20), ಕುಂಜತ್ತೂರಿನ ನಿಕೇಶ್ (19) ಬಂಧಿತ ಆರೋಪಿಗಳು. ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ ಕೋಟೆಕಾರು ಬೀರಿ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಫೆ. 17ರಂದು ಕಾಲೇಜಿನ ವಿದ್ಯಾರ್ಥಿಗಳಾದ ಅಹ್ಮದ್ ಇಮ್ರಾನ್ ಮತ್ತು ಫೈಝಲ್ ಎಂಬಿಬ್ಬರ ಮೇಲೆ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು.
ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾ ಎಸ್ಐ ವಿನಾಯಕ ತೋರಗಲ್, ಎಎಸ್ಐ ವಿಶ್ವನಾಥ ರೈ, ದಕ್ಷಿಣ ಉಪವಿಭಾಗ ರೌಡಿ ನಿಗ್ರದ ದಳ ಸಿಬ್ಬಂದಿಗಳಾದ ಮೋಹನ್, ಶರೀಫ್, ರಾಜಾರಾಮ, ಇಕ್ಬಾಲ್, ಚಿದಾನಂದ, ಸುರೇಶ ಮತ್ತು ವಾಸುದೇವ ಭಾಗವಹಿಸಿದ್ದರು.