ಮತ ಚಲಾಯಿಸಲು ಬರುವ ಅನಿವಾಸಿ ಭಾರತೀಯರಿಗೆ ಮೊಯ್ದಿನ್ ಬಾವ ಉಚಿತ ವಿಮಾನ ಟಿಕೆಟ್ ನೀಡುತ್ತಾರಾ?
ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪ್ರಚಾರ!
ಮಂಗಳೂರು, ಫೆ.19: ಚುನಾವಣೆ ಸಂದರ್ಭ ಅರಬ್ ರಾಷ್ಟ್ರಗಳಲ್ಲಿರುವ ಮಂಗಳೂರು ಉತ್ತರದ ಯುವಕರು ಮತದಾನಕ್ಕಾಗಿ ಊರಿಗೆ ಬರಲು ಶಾಸಕ ಮೊಯ್ದಿನ್ ಬಾವ ಉಚಿತ ವಿಮಾನ ಟಿಕೆಟ್ ನೀಡುತ್ತಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮೊಯ್ದಿನ್ ಬಾವ ಈ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಸೆಳೆಯುವ ಸಲುವಾಗಿ ಉಚಿತ ವಿಮಾನ ಟಿಕೆಟ್ ನೀಡಲಾಗುತ್ತದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇವೆಲ್ಲಾ ಅಪ್ಪಟ ಸುಳ್ಳಾಗಿದ್ದು, ವಿಘ್ನ ಸಂತೋಷಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಶಾಸಕ ಮೊಯ್ದಿನ್ ಬಾವ ಈ ಬಗ್ಗೆ ಯಾವ ಘೋಷಣೆಯನ್ನೂ ಮಾಡಿಲ್ಲ, ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ವಿದೇಶದಲ್ಲಿರುವ ಕ್ಷೇತ್ರದ ಮತದಾರರು ಚುನಾವಣೆ ಸಂದರ್ಭ ಊರಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಕಂಪೆನಿಗಳ ಮುಖ್ಯಸ್ಥರೊಂದಿಗೆ ಈಗಾಗಲೇ ಮೊಯ್ದಿನ್ ಬಾವ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಉಚಿತ ಟಿಕೆಟ್ ಸುದ್ದಿಗಳು ಮಾತ್ರ ಅಪ್ಪಟ ಸುಳ್ಳು. ಇಂತಹ ಸಂದೇಶಗಳನ್ನು ಯಾರೂ ನಂಬಬಾರದು ಎಂದು ಶಾಸಕರು ಹೇಳಿರುವುದಾಗಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ ತಿಳಿಸಿದ್ದಾರೆ.