ತಲಪಾಡಿಯಲ್ಲಿ ವಿದ್ಯಾಥಿಗಳಿಗೆ ಹಲ್ಲೆ ಪ್ರಕರಣ: ಕ್ಯಾಂಪಸ್ ಫ್ರಂಟ್ನಿಂದ ಪ್ರತಿಭಟನೆ
ಉಳ್ಳಾಲ, ಫೆ. 20: ತಲಪಾಡಿಯಲ್ಲಿ ಅಮಾಯಕ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ವತಿಯಿಂದ ತಲಪಾಡಿ ಬಸ್ ನಿಲ್ದಾಣದ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.
ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಫಯಾಝ್ ದೊಡ್ಡಮನೆ ಅವರು ಮಾತನಾಡಿ, ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಮಿತಿಮೀರುತ್ತಿದ್ದು ಭಯದ ವಾತಾವಾರಣ ನಿರ್ಮಾಣವಾಗಿದೆ. ಅದರಲ್ಲೂ ಕೇರಳ ಮೂಲದ ವಿದ್ಯಾರ್ಥಿಗಳನ್ನು ಗುರಿಪಡಿಸಲಾಗುತ್ತಿದೆ ಪರಿಣಾಮ ಇದು ಎರಡು ರಾಜ್ಯಗಳ ಮಧ್ಯೆ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಮಸೀದಿ ಮಂದಿರಗಳನ್ನು ಸುತ್ತುತ್ತಾ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದಾರೆ. ಜವಬ್ದಾರಿ ಅರಿತು ವಿದ್ಯಾರ್ಥಿಗಳ ನೋವನ್ನು ಆಲಿಸಬೇಕಾದವರ ವರ್ತನೆ ವಿದ್ಯಾರ್ಥಿ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ. ಕೇರಳದಿಂದ ಬರುವ ವಿದ್ಯಾರ್ಥಿಗಳ ಮೇಲೆ ನಿರಂತರ ಹಲ್ಲೆಗಳು ಮುಂದುವರಿದಲ್ಲಿ ರಾಜ್ಯಗಳ ನಡುವೆ ಬಿಕ್ಕಟ್ಟು ಸೃಷ್ಟಿಸಿದಲ್ಲಿ ಅದನ್ನು ತಡೆಯುವುದು ಬಹಳ ಕಷ್ಟದಾಯಕವಾಗಬಹುದು. ಅಂತಹ ಸ್ಥಿತಿ ನಿರ್ಮಾಣ ಆಗುವ ಮೊದಲು ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಕ್ಯಾಂಪಸ್ ಫ್ರಂಟ್ ಕಟಿಬದ್ದವಾಗಿದೆ ಎಂದು ಭರವಸೆ ನೀಡಿದರು. ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹುಲ್ ಕೊಣಾಜೆ ಕಾರ್ಯಕ್ರಮವನ್ನು ನಿರೂಪಿಸಿದರು ನಿಝಾಮ್ ಸ್ವಾಗತಿಸಿ ವಂದಿಸಿದರು.