ತಂತ್ರಜ್ಞಾನ ಅಭಿವೃದ್ಧಿಗೆ ಶಿಕ್ಷಣ ಅಗತ್ಯ: ಡಾ. ಮೊರಾಸ್
‘ಎಟಿಸಿ ಆನ್ಲೈನ್ ಎಲ್ಎಲ್ಪಿ’ಗೆ ಚಾಲನೆ
ಮಂಗಳೂರು, ಫೆ. 20: ತಂತ್ರಜ್ಞಾನ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಅಗತ್ಯವಾಗಿದೆ ಎಂದು ಬೆಂಗಳೂರಿನ ಅತಿ. ವಂ. ಆರ್ಚ್ಬಿಷಪ್ ಡಾ.ಬೆರ್ನಾರ್ಡ್ ಮೊರಾಸ್ ಹೇಳಿದ್ದಾರೆ.
ಏಶಿಯನ್ ಟ್ರೇಡಿಂಗ್ ಕಾರ್ಪೋರೇಶನ್ (ಎಟಿಸಿ) ಪ್ರಕಾಶನ ಸಂಸ್ಥೆ ಹಾಗೂ ಬ್ರಿಲಿಯಂಟ್ ಪ್ರಿಂಟರ್ಸ್ ಎಂಬ ಎಟಿಸಿ ಸಮೂಹವು ನಗರದ ಗೋಲ್ಡ್ಫಿಂಚ್ ಸಮುಚ್ಛಯದಲ್ಲಿ ಸ್ಥಾಪಿಸಿದ ‘ಎಟಿಸಿ ಆನ್ಲೈನ್ ಎಲ್ಎಲ್ಪಿ’ಗೆ ಚಾಲನೆ ನೀಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಾದಾಗ ಮಾತ್ರ ತಾಂತ್ರಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸೂಕ್ತ ಮಾಹಿತಿಗಳ ಅಗತ್ಯವಿದ್ದು, ಇಂದು ಚಾಲನೆಗೊಂಡ ‘ಎಟಿಸಿ ಆನ್ಲೈನ್ ಎಲ್ಎಲ್ಪಿ’ ಎಂಬ ತಾಂತ್ರಿಕ ಅಭಿವೃದ್ಧಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.
ಮಂಗಳೂರು ಬಿಷಪ್ ಅತಿ. ವಂ.ಡಾ.ಅಲೋಶಿಯಸ್ ಪೌಲ್ ಡಿಸೋಜ, ಶಾಸಕ ಲೋಬೊ ಸಂಸ್ಥೆಯ ನಿರ್ದೇಶಕರಾದ ನೈಜಿಲ್ ಫೆರ್ನಾಂಡಿಸ್, ಪೀಟರ್ ಅನಿಲ್ ರೇಗೊ ಹಾಗೂ ಮ್ಯಾನೇಜರ್ ರಿಚರ್ಡ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಟಿಸಿ ಸಂಸ್ಥೆ ಧಾರ್ಮಿಕ, ನೈತಿಕ ಹಾಗೂ ಆಧ್ಯಾತ್ಮಿಕ ಪ್ರಕಟಣೆಗಳನ್ನು ಕೇಂದ್ರವಾಗಿರಿಸಿ ಈಗಾಗಲೇ 2000ಕ್ಕೂ ಅಧಿಕ ಪಬ್ಲಿಕೇಶನ್ ಹೊರತಂದಿದೆ. ಎಟಿಸಿ ಜಾಲ ನಿರ್ವಹಣಾ ಸಂಸ್ಥೆ ತನ್ನ ಪ್ರಮುಖ ವ್ಯವಹಾರವಾದ ಪ್ರಕಾಶನ ಮತ್ತು ಮುದ್ರಣಗಳನ್ನು ದತ್ತಾಂಶ ರೂಪ ಪರಿವರ್ತನೆಗೆ ಒತ್ತು ನೀಡುತ್ತಿದೆ. ತನ್ನ ಸುಪರ್ದಿಯಲ್ಲಿರುವ ಎಲ್ಲ ಪ್ರಕಾಶನಗಳನ್ನು ಡಿಜಿಟಲ್ಗೆ ಪರಿವರ್ತನೆ ಮಾಡಿದ್ದು, ಈ ಮೂಲಕ ತನ್ನ ಎಲ್ಲ ಗ್ರಾಹಕರಿಗೆ ಪರಂಪರೆ ಮತ್ತು ಡಿಜಿಟಲ್ ರೂಪದ ಸೇವೆ ನೀಡಲು ಉದ್ದೇಶಿಸಿದೆ. ಈ ನಿಟ್ಟನಲ್ಲಿ ಮಂಗಳೂರಿನಲ್ಲಿ ನೂತನ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ನಿರ್ದೇಶಕ ಐವನ್ ಫೆರ್ನಾಂಡಿಸ್ ತಿಳಿಸಿದರು.