ಬೈಕ್ ಪಲ್ಟಿ: ಸವಾರ ವಿದ್ಯಾರ್ಥಿ ಮೃತ್ಯು
ಉಡುಪಿ, ಫೆ.20: ಬೈಕೊಂದು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ.
ಮೃತ ಸವಾರರನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ರಜತ್ ಎಂದು ಗುರುತಿಸಲಾಗಿದೆ. ಇವರು ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ಕಾಲೇಜು ಮಹಿಳಾ ನೆಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಮಧ್ಯಪ್ರದೇಶದ ಭೂಪಾಲ್ನಿಂದ ಆಗಮಿಸಿದ ಆರ್ಜಿಪಿವಿ ವಿವಿ ತಂಡವನ್ನು ಮಿನಿ ಬಸ್ಸಿನಲ್ಲಿ ಕಳುಹಿಸಿದ ಬಳಿಕ, ಸ್ನೇಹಿತ ರಕ್ಷಿತ್ ಶೆಟ್ಟಿ ಎಂಬವರ ಬೈಕ್ನಲ್ಲಿ ರಾಜಾಂಗಣದತ್ತ ಬರುತಿದ್ದಾಗ ಈ ಘಟನೆ ನಡೆದಿದೆ.
ರಜತ್ ಇಂದ್ರಾಳಿಯಿಂದ ಕಲ್ಸಂಕದ ಕಡೆ ವೇಗವಾಗಿ ಬರುತಿದ್ದಾಗ ಬೈಕ್ , ಕುಂಜಿಬೆಟ್ಟು ಕರ್ನಾಟಕ ಬ್ಯಾಂಕ್ ಎದುರು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story