ಭಟ್ಕಳ: ರಸ್ತೆ ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರ ಬಲಿ
ಭಟ್ಕಳ, ಫೆ. 21: ಸಂಶುದ್ದೀನ್ ವೃತ್ತದ ಬಳಿ ಬುಧವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಇಲ್ಲಿನ ಮದೀನಾ ಕಾಲನಿ ನಿವಾಸಿ ಇಬ್ರಾಹೀಂ ಶೇಖ್ (75) ಎಂದು ಗುರುತಿಸಲಾಗಿದೆ.
ಅವರು ಮದೀನಾ ಕಾಲನಿಯಿಂದ ತಮ್ಮ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಕುಂದಾಪುರ ಕಡೆ ಹೋಗುತ್ತಿದ್ದ ಲಾರಿಯೊಂದು ಹಿಂಬದಿಯಿಂದ ಬಂದು ಇಬ್ರಾಹೀಂ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಅಪಘಾತದಿಂದ ರಸ್ತೆಗೆ ಎಸೆಯಲ್ಪಟ್ಟ ಅವರ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಇಬ್ರಾಹೀಂ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನಿಗಾಗಿ ಹುಡಕಾಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು, ಕೆಲ ಸಮಯ ಹೆದ್ದಾರಿ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿತ್ತು.
ಮೃತ ಇಬ್ರಾಹೀಂ ಶೇಖ್ ಕಾರವಾರ ಮೂಲದವರಾಗಿದ್ದು, ಕಳೆದ 40 ವರ್ಷಗಳಿಂದ ಭಟ್ಕಳದಲ್ಲಿ ವಾಸವಾಗಿದ್ದರು. ಭಟ್ಕಳದ ಇಲಾಖೆ ಯೊಂದರಲ್ಲಿ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸಿದ್ದು, ಸದ್ಯ ನಿವೃತ್ತ ಜೀವನ ಸಾಗಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.