‘ಯುನಿಟಿ ಆಸ್ಪತ್ರೆ’ಗೆ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ನಿಂದ ಪ್ರತಿಷ್ಠಿತ ವೈದ್ಯಕೀಯ ಸೇವಾ ಪ್ರಶಸ್ತಿ ಪ್ರದಾನ
ಮಂಗಳೂರು, ಫೆ.27: ಬೆಲ್ಜಿಯಂನ ಬ್ರುಸೆಲ್ಸ್ನಲ್ಲಿರುವ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ನ ಪ್ರತಿಷ್ಠಿತ ವೈದ್ಯಕೀಯ ಸೇವಾ ಪ್ರಶಸ್ತಿಯು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಲಭಿಸಿದೆ.
ದುಬೈಯಲ್ಲಿ ಇತ್ತೀಚೆಗೆ ನಡೆದ ಅರಬ್ ಹೆಲ್ತ್ ಕಾಂಗ್ರೆಸ್ನಲ್ಲಿ ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಅವರು ಅಸೋಸಿಯೇಶನ್ನ ಅಧ್ಯಕ್ಷ ಪ್ರೊ.ಡಾ.ವಿನ್ಸೆರೊ ಕೊಸ್ಟಿಗ್ಲಿಯೋಲಾ ಅವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಡಾ. ಸಿ.ಪಿ.ಹಬೀಬ್ ರಹ್ಮಾನ್ ಕಳೆದ ನಾಲ್ಕು ದಶಕಗಳಿಂದ ಯುನಿಟಿ ಆಸ್ಪತ್ರೆ ಸಲ್ಲಿಸುತ್ತಿರುವ ಅತ್ಯುತ್ತಮ ಆರೋಗ್ಯ ಸೇವೆಗೆ ಸಂದ ಗೌರವ ಇದಾಗಿದೆ. ಈ ಸಂದರ್ಭ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ (ಇಎಂಎ) ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ನಡುವಿನ ಪಾತ್ರವನ್ನು ಹೋಲಿಕೆ ಮಾಡಿದ್ದೇನೆ. ದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಪೂರೈಸುವ ಸಲುವಾಗಿ ಭಾರತ ಸರಕಾರವು ಭಾರತೀಯ ವೈದ್ಯಕೀಯ ಸಂಘದ ಬಗೆಗಿನ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ್ದೇನೆ ಎಂದರು.
ಆರೋಗ್ಯ ಕ್ಷೇತ್ರದ ಸವಾಲನ್ನು ದಿಟ್ಟವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತವು ತನ್ನ ವೈದ್ಯ ಸಮುದಾಯವನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಆರೋಗ್ಯ ಸೇವೆ ವಿತರಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ನೀತಿ, ನಿರ್ಧಾರಗಳನ್ನು ರೂಪಿಸುವಾಗ ಯೂರೋಪಿಯನ್ ಮಾದರಿಯನ್ನು ಪರಿಗಣಿಸಬೇಕಾದ ಅಗತ್ಯವಿದೆ. ಯೂರೋಪಿಯನ್ ಪಾರ್ಲಿಮೆಂಟ್ನಲ್ಲಿ ಇಎಂಎಗೆ ಪ್ರಬಲ ಪ್ರಾತಿನಿಧ್ಯ ಇದೆ. ಈ ರೀತಿ ಭಾರತದ ಸಂಸತ್ತು ಕೂಡಾ ಐಎಂಎಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾಮಟ್ಟದ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಬೇಕಿದೆ ಎಂದರು.
ಅತೀ ದೊಡ್ಡ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಐಎಂಎ ಭಾರತದಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆಯನ್ನು ನೀಡಿದೆ. ಭಾರತದಲ್ಲಿ ರೋಗಿಗಳ ಆರೈಕೆ ನಿರಂತರವಾಗಿ ಸುಧಾರಿಸುತ್ತಾ ಬಂದಿದೆ. ಪ್ರತಿಯೊಂದು ಕಡೆಯೂ ಸುಧಾರಣೆಯಲ್ಲಿ ವೈದ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರ ವಹಿಸಿದೆ. ವೈದ್ಯಕೀಯ ಶಿಕ್ಷಣ ವ್ಯವಸ್ಥೆಯು ಅಗತ್ಯವಿರುವ ಜನರಿಗೆ ಒಳ್ಳೆಯ ಆರೋಗ್ಯ ಸೌಲಭ್ಯವನ್ನು ಒದಗಿಸುವಲ್ಲಿ ದೊಡ್ಡ ಮಟ್ಟಿನ ನೆರವು ನೀಡುತ್ತಿದೆ ಎಂದು ಡಾ.ಸಿ.ಪಿ.ಹಬೀಬ್ ರಹ್ಮಾನ್ ಹೇಳಿದರು.
ದೇಶದ ಆರೋಗ್ಯ ನೀತಿಯನ್ನು ಸುಧಾರಿಸುವಲ್ಲಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿ ಹಕ್ಕುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಗೆ ಗಣನೀಯವಾಗಿ ಕೊಡುಗೆ ನೀಡುವವರಿಗೆ ಅರೋಗ್ಯ ಸೇವೆ ವ್ಯವಸ್ಥೆಯು ಹೆಚ್ಚಿನ ನೆರವು ನೀಡಬೇಕಾಗಿದೆ ಎಂದರು.
ಮಂಗಳೂರು ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ತಾಣವಾಗಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯ ಗುಣಮಟ್ಟ, ಚಿಕಿತ್ಸೆಯ ವೆಚ್ಚ ಕಡಿತ, ಆರೋಗ್ಯ ಶಿಬಿರಗಳು ಮತ್ತು ಜಾಗೃತಿ ಕಾರ್ಯಕ್ರಮಗಳು, ನರ್ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಹಲವು ಆಯಾಮಗಳನ್ನು ಪರಿಗಣಿಸಬೇಕಾದ ಅಗತ್ಯವಿದೆ. ಮಂಗಳೂರಿನ 100 ಕಿ. ಮೀ. ವ್ಯಾಪ್ತಿಯಲ್ಲಿ ಗರಿಷ್ಠ ಸಂಖ್ಯೆಯ ವೈದ್ಯಕೀಯ ಶಿಕ್ಷಣ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು, ಹೈದರಾಬಾದ್, ಕಣ್ಣೂರು ಮತ್ತು ಚೆನ್ನೈ ಸೇರಿದಂತೆ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಅತ್ಯಧಿಕ. ಮಂಗಳೂರಿನ ಆರ್ಥಿಕತೆಯು ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ನೆರವು ಪಡೆಯುತ್ತಿದೆ. ಇದು ಮಂಗಳೂರಿನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಟ್ಟಿವೆ ಎಂದರು.
ಅರೋಗ್ಯ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಮಹಾನಗರ ಪಾಲಿಕೆ ಸೇರಿದಂತೆ ಸರಕಾರಿ ಸಂಘ ಸಂಸ್ಥೆಗಳು ಈ ಅಂಶಗಳನ್ನು ಪರಿಗಣಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಡಾ. ಅನಂತ್ ಮೋಹನ್ ಪೈ ಉಪಸ್ಥಿತರಿದ್ದರು.