ಮುಂದೊಂದು ದಿನ ಸಚಿವೆಯಾಗುವೆ: ಮೇಯರ್ ಕವಿತಾ ಸನಿಲ್ ಆತ್ಮವಿಶ್ವಾಸ
ಮಂಗಳೂರು, ಮಾ. 7: ಮಾರ್ಚ್ 8ರಂದು ಮೇಯರ್ ಸ್ಥಾನದಿಂದ ನಿರ್ಗಮಿಸಲಿರುವ ಮೇಯರ್ ಕವಿತಾ ಸನಿಲ್ರವರು ಮುಂದೊಂದು ದಿನ ತಾನು ಶಾಸಕಿಯಾಗಿ, ಸಚಿವೆಯಾಗುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇಯರ್ ಆಗಿ ಇದು ತನ್ನ ಕೊನೆಯ ಪತ್ರಿಕಾಗೋಷ್ಠಿಯಾಗಿದೆ ಎಂದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಮೇಯರ್ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನನ್ನಿಂದಾದ ಸೇವೆ ಒದಗಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ತನಗೆ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹ ನೀಡಿ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯುವಲ್ಲಿ ಮಾಧ್ಯಮದವರು ತನಗೆ ಸಹಕಾರ ನೀಡಿದ್ದಾರೆ. ಆಡಳಿತದಲ್ಲಿ ರಸ್ತೆಗಳ ರಿಪೇರಿ, ಶೌಚಾಲಯ, ನೀರಿನ ಸಮಸ್ಯೆ ಕುರಿತಂತೆ ಸಮಸ್ಯೆ ಎದುರಾದಾಗ ಎಚ್ಚರಿಕೆ ನೀಡಿ ಸಾರ್ವಜನಿಕ ಹಿತದೃಷ್ಟಿಯಿಂದ ಸ್ಪಂದಿಸುವಲ್ಲಿ ಮಾಧ್ಯಮದ ಜತೆಯಲ್ಲೇ ಉಸ್ತುವಾರಿ ಸಚಿವರಾದಿಯಾಗಿ ಸ್ಥಾಯಿ ಸಮಿತಿ ಅಧ್ಯಕ್ಷರೂ ಸಹಕಾರ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ 180 ಕೋಟಿ ರೂ.ಗಳಿಗೂ ಅಧಿಕ ಅಂದಾಜು ವೆಚ್ಚದ ಕಾಮಗಾರಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರ ಸ್ವೀಕರಿಸಿದ ಸಂದರ್ಭ ಎದುರಾಗಿದ್ದು ನೀರಿನ ಸಮಸ್ಯೆ, ಆ ಸಂದರ್ಭ ತುಂಬೆ ಅಣೆಕಟ್ಟಿನ ಎತ್ತರವನ್ನು 6 ಮೀಟರ್ಗೆ ನಿಲುಗಡೆ ಮಾಡುವುದಾಗಿ ಭರವಸೆ ನೀಡಿದ್ದು, ಅದನ್ನು ಈಡೇರಿಸಿರುವ ತೃಪ್ತಿ ಇದೆ. ನನ್ನ ಅವಧಿಯಲ್ಲಿ ಐದು ಇ- ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ ಕಡೆಯೂ ಇ ಶೌಚಾಲಯ ನಿರ್ಮಿಸಲು ಸಂಘ ಸಂಸ್ಥೆಗಳು ಆಸಕ್ತಿ ತೋರಿ ಮಾತುಕತೆ ನಡೆದಿದೆ.
ಪುರಭವನದ ಬಾಡಿಗೆ ಸಮಸ್ಯೆಯನ್ನು ನಿವಾರಿಸಿ ಕಲಾವಿದರಿಗೆ ಅನುಕೂಲವಾಗುವಂತೆ ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇನೆ. ನಗರದಲ್ಲಿ ಸೂಚನಾ ಬೃಹತ್ (1 ಕೋಟಿ ರೂ. ವೆಚ್ಚ) ಹಾಗೂ ಸಣ್ಣ ಸೂಚನಾ ಫಲಕ (ಒಂದೂವರೆ ಕೋಟಿ ರೂ. ವೆಚ್ಚ)ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಇಂದು ಆ ಸಾಂಕೇತಿಕ ಉದ್ಘಾಟನೆ ನೆರವೇರಿಸಲಾಗಿದೆ. ಫೋನ್ ಇನ್ ಕಾರ್ಯಕ್ರಮದ ಮೂಲಕ ತಕ್ಷಣ ಬಗೆಹರಿಸಬಹುದಾದ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆ ದಿನಾಚರಣೆಯ ಜತೆಗೆ ಶ್ರೀನಿವಾಸ ಮಲ್ಯ ಪ್ರಶಸ್ತಿಯನ್ನು ಆರಂಭಿಸಲಾಗಿದೆ. ನೆಹರೂ ಮೈದಾನದ ದ್ವಾರ ಸಿದ್ಧವಾಗುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಅವರು ಹೇಳಿದರು.
ನಾನು ಮೇಯರ್ ಆಗುವುದಕ್ಕಿಂತ ಮೊದಲೇ ನಗರದ ಹಂಪನಕಟ್ಟೆಯಲ್ಲಿನ ಕ್ಲಾಕ್ಟವರ್ ತೆರವುಗೊಳಿಸಿದ ಬಗ್ಗೆ ಬೇಸರವಿತ್ತು. ಮೇಯರ್ ಆದಾಗ ಅದನ್ನು ನನ್ನ ಕನಸಾಗಿಸಿ, ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಅದಕ್ಕೆ ಸಮ್ಮತಿ ದೊರಕುವ ಮೂಲಕ ಕನಸು ಈಡೇರಿಂತಾಗಿದೆ ಎಂದು ಅವರು ಹೇಳಿದರು.
ಮಸಾಜ್ ಪಾರ್ಲರ್, ಸ್ಕಿಲ್ ಗೇಮ್ಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಇರಾದೆಯೊದಿಗೆ ಸಾಕಷ್ಟು ದಾಳಿಗಳನ್ನು ನಡೆಸಲಾಯಿತಾದರೂ ನ್ಯಾಯಾಲಯದ ತಡೆಯಿಂದಾಗಿ ಅದು ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಎಂಬ ಬೇಸರ ಇದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಂಪೂರ್ಣ ಸಹಕಾರ ದೊರಕಿದ್ದರೆ ಇದು ಸಾಧ್ಯವಾಗುತ್ತಿತ್ತು. ಅದು ಸಂಪೂರ್ಣವಾಗಿ ನಿಲ್ಲಬೇಕು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ನನ್ನ ಅವಧಿಯಲ್ಲಿ ನನ್ನಿಂದಾಗುವ ಎಲ್ಲಾ ಸಮಸ್ಯೆಗಳ ಇತ್ಯರ್ಥ, ಕಾಮಗಾರಿಗಳನ್ನು ಮಾಡುವ ಮೂಲಕ ಸಾರ್ವಜನಿಕರ ಸೇವೆ ಮಾಡಲು ಯಾವುದೇ ರಾಜಿ ಇಲ್ಲದೆ ಪ್ರಯತ್ನಿಸಿ್ದೇನೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
ಅನಧಿಕೃತ ಕಟ್ಟಡಗಳ ವಿರುದ್ಧ ಸ್ವರ ಎತ್ತುವೆ
ನಗರದಲ್ಲಿ ಅನಧಿಕೃತ ಕಟ್ಟಡಗಳು ಬಹಳಷ್ಟಿವೆ. ಕಾರು ಪಾರ್ಕನ್ನು ಬಾರ್ ಮಾಡಿದವರೂ ಇದ್ದಾರೆ. ಇಂತಹ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೇನೆ. ಅಧಿಕಾರಿಗಳು ನೋಟೀಸು ನೀಡಿದ್ದೇವೆ ಎನ್ನುತ್ತಾರೆ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನಾನು ಈಗಲೂ ಬದ್ಧಳಾಗಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ವರ ಎತ್ತುವೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.