ಮಾ.16: ಮಂಗಳೂರಿನಲ್ಲಿ ಮುಸ್ಲಿಂ ಸಮಾವೇಶ
ಮಂಗಳೂರು, ಮಾ.14: ಮುಸ್ಲಿಂ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಜಾತ್ಯತೀತತೆ, ರಾಷ್ಟ್ರೀಯತೆ, ಕೋಮುವಾದ’ ಎಂಬ ವಿಷಯದಲ್ಲಿ ಯುನಿವೆಫ್ ಕರ್ನಾಟಕವು ಮಾ.16ರಂದು ಸಂಜೆ 6:40ಕ್ಕೆ ನಗರದ ಪುರಭವನದಲ್ಲಿ ‘ಮುಸ್ಲಿಂ ಸಮಾವೇಶ’ವನ್ನು ಆಯೋಜಿಸಿದೆ.
ದೇಶದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆಯ ಪ್ರಯೋಜನವನ್ನು ಪಡೆದು ಕೋಮುವಾದಿಗಳು ತಮ್ಮ ಗುಪ್ತ ಅಜೆಂಡಾಗಳನ್ನು ದೇಶಾದ್ಯಂತ ಹೇರಲು ಪ್ರಯತ್ನಿಸುತ್ತಿದ್ದಾರೆ. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಸುಂದರ ಘೋಷಣೆಯು ತನ್ನ ಅರ್ಥವನ್ನು ಕಳೆದುಕೊಂಡಿದ್ದು, ದೇಶದಲ್ಲಿ ಗೂಂಡಾಗಿರಿ ತಾಂಡವಾಡುತ್ತಿದೆ. ಕೋಮುವಾದವು ಭಯೋತ್ಪಾದನೆಯಷ್ಟೇ ಭೀಕರವಾಗಿದೆ. ಭಯೋತ್ಪಾದಕರನ್ನು ಶಿಕ್ಷಿಸಲು ಕಾನೂನಿಗಳಿದ್ದರೆ ಕೋಮುವಾದವು ಕೆಲವು ಸುಂದರ ಪದಗಳ ಹಾಗೂ ವ್ಯಾಖ್ಯಾನಗಳಡಿಯಲ್ಲಿ ದಫನಗೊಳ್ಳುವುದರಿಂದ ಅದು ಅಪರಾಧವಾಗಿ ಕಾಣುತ್ತಿಲ್ಲ. ಮುಂದಿನ ಪೀಳಿಗೆಯನ್ನು ಈ ದೇಶದ ಅಖಂಡತೆ, ಸಾರ್ವಭೌಮತೆ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿಯಾದರೂ ಜಾಗೃತಗೊಳಿಸಬೇಕಾಗಿದೆ. ಈ ದೇಶದ ಒಂದು ದೊಡ್ಡ ಸಮುದಾಯ ಅಲ್ಪಸಂಖ್ಯಾತರು ಎಂಬ ಹೆಸರಿನಲ್ಲಿ ಕೋಮುವಾದಕ್ಕೆ ಬಲಿಯಾಗಿದೆ. ಈ ಕುರಿತು ಅವರಲ್ಲಿ ಜಾಗೃತಿಯನ್ನು ಮೂಡಿಸಲು ಮುಸ್ಲಿಂ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಎಸ್.ಬಿ.ದಾರಿಮಿ, ಕೆ.ಎ.ಬಶೀರ್ ಮದನಿ ಕೂಳೂರು, ಕೆ.ಎಂ.ಶರೀಫ್, ಅಬ್ದುಲ್ ರಶೀದ್ ಉಳ್ಳಾಲ, ಹಾಜಿ ಎಸ್.ಎಂ.ರಶೀದ್, ಬಿ.ಎಂ.ಮುಮ್ತಾಝ್ ಅಲಿ, ಮುಸ್ತಫಾ ಕೆಂಪಿ, ಅಲಿ ಹಸನ್ ಭಾಗವಹಿಸಲಿದ್ದು, ಯುನಿವೆಫ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.