ರಾಜ್ಯದಲ್ಲಿ ಯೋಗಿ ಆಟ ನಡೆಯದು : ಸಚಿವ ರೈ
ಪುತ್ತೂರು,ಮಾ.15: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬಿಜೆಪಿ ತನ್ನ ಸ್ಟಾರ್ ಪ್ರಚಾರಕ ಎಂದು ಬಿಂಬಿಸುತ್ತಾ ಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅವರನ್ನು ಬಳಸಿಕೊಂಡು ಮತ ಪಡೆಯಲು ನಿರ್ಧರಿಸಿತ್ತು. ಆದರೆ ಈಗ ಆದಿತ್ಯನಾಥ್ ಅವರು ಮುಗ್ಗರಿಸಿ ಬಿದ್ದಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕ ಇನ್ನು ಸುಲಭದಲ್ಲಿ ಏಳೋದು ಕಷ್ಟ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ .ಇಲ್ಲಿ ಯೋಗಿಯ ಆಟ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಪುತ್ತೂರಿನಲ್ಲಿ ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು ಮೂವತ್ತು ವರ್ಷಗಳಿಂದ ಬಿಜೆಪಿಯನ್ನೇ ಗೆಲ್ಲಿಸುತ್ತಾ ಬಂದಿರುವ ಯೋಗಿ ಆದಿತ್ಯನಾಥ್ ಅವರು ಸತತ ಸಂಸತ್ತಿಗೆ ಆಯ್ಕೆಯಾಗುತ್ತಾ ಬಂದಿದ್ದ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಈಗ ಬಿಜೆಪಿಗೆ ಹೀನಾಯ ಸೋಲಾಗಿದೆ. ಫುಲ್ಪುರದಲ್ಲೂ ಪಕ್ಷ ಪರಾಭವಗೊಂಡಿದೆ. ತನ್ನ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗದ ಯೋಗಿ ಅವರು ಇನ್ನು ಯಾವ ಶಕ್ತಿ ಇಟ್ಟುಕೊಂಡು ಕರ್ನಾಟಕದಲ್ಲಿ ಪ್ರಚಾರ ನಡೆಸಿಯಾರು ಎಂದು ಪ್ರಶ್ನಿಸಿದರು.
ಕೇವಲ ಉತ್ತರಪ್ರದೇಶ ಮಾತ್ರವಲ್ಲ, ಇತ್ತೀಚಿನ ವರ್ಷದಲ್ಲಿ ದೇಶದೆಲ್ಲೆಡೆ ನಡೆದ 13 ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಉತ್ತರ ಭಾರತದ ಜನ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬುದಕ್ಕೆ ಇವೇ ಸಾಕ್ಷಿಯಾಗಿದೆ. ಎಲ್ಲಾ ಜಾತ್ಯತೀತ ಶಕ್ತಿಗಳು ಒಟ್ಟಾದರೆ ಮತೀಯ ಶಕ್ತಿಗಳನ್ನು ಸೋಲಿಸಬಹುದು ಎಂಬುದನ್ನು ಈಗ ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ತೋರಿಸಿದೆ ಎಂದರು.
ಸುಳ್ಳನ್ನೇ ಹಲವು ಬಾರಿ ಹೇಳಿ ಹೇಳಿ ಅದನ್ನೇ ಸತ್ಯವೆಂದು ಜನ ನಂಬುವಂತೆ ಮಾಡಲು ಬಿಜೆಪಿ ಯತ್ನಿಸಿದೆ. ಒಬ್ಬರನ್ನು ಒಮ್ಮೆ ಮೋಸ ಮಾಡಬಹುದು. ಒಮ್ಮೆ ಎಲ್ಲರನ್ನೂ ಮೋಸ ಮಾಡಬಹುದು. ಆದರೆ ಎಲ್ಲರನ್ನೂ ಎಲ್ಲಾ ಸಂದರ್ಭದಲ್ಲಿ ಮೋಸ ಮಾಡಲಾಗದು ಎಂದ ಸಚಿವ ರಮಾನಾಥ ರೈ ಅವರು ಇನ್ನು ಮುಂದೆ ಬಿಜೆಪಿಗರ ಸುಳ್ಳು ನಡೆಯೋದಿಲ್ಲ. ಜನತೆಗೆ ವಾಸ್ತವ ಅಂಶ ಏನೆಂಬುದು ಗೊತ್ತಾಗಿದೆ .ಉಪ ಚುನಾವಣೆಯ ಫಲಿತಾಂಶಗಳು ಇದನ್ನು ತೋರಿಸಿಕೊಟ್ಟಿವೆ ಎಂದರು.
ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ಪಕ್ಷ ಶೋಕಾಸ್ ನೊಟೀಸ್ ನೀಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ ಅವರು ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇದರ ಬಗ್ಗೆ ನಾನು ಪಕ್ಷದ ವೇದಿಕೆಗಳಲ್ಲಿ ಮಾತನಾಡುತ್ತೇನೆಯೇ ಹೊರತು ಮಾಧ್ಯಮಗಳ ಮುಂದೆ ಏನೂ ಹೇಳಲಾರೆ. ನಾನು ಹಿಂದಿನಿಂದಲೂ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದವನಲ್ಲ. ಇನ್ನೂ ಹೇಳಲಾರೆ. ಕಾಂಗ್ರೆಸ್ ಎಂಬುದು ನನ್ನ ಪಕ್ಷ ಮಾತ್ರವಲ್ಲ, ಅದು ನನ್ನ ಧರ್ಮ ಕೂಡ ಹೌದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.