ತೆರಿಗೆ ರಶೀದಿ ಪುಸ್ತಕಗಳ ಕೊರತೆಯಲ್ಲಿ ಗ್ರಾ.ಪಂಚಾಯತ್ಗಳು
ಜಿ.ಪಂನ ಬೇಜವ್ದಾರಿಯಿಂದಾಗಿ ಸಂಪನ್ಮೂಲ ಕ್ರೋಢಿಕರಣ ಕುಂಠಿತ
ಮೂಡುಬಿದಿರೆ : ಗ್ರಾಮ ಪಂಚಾಯತ್ಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಪಂಚಾಯತ್ನಿಂದ ಸರಬರಾಜಾಗುವ ತೆರಿಗೆ ರಶೀದಿ ಪುಸ್ತಕಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಆದರೆ ಜಿ.ಪಂನ ಬೇಜಬ್ದಾರಿಯಿಂದಾಗಿ ಇತ್ತೀಚಿನ ಕೆಲವು ದಿನಗಳಿಂದ ಗ್ರಾಮ ಪಂಚಾಯತ್ಗಳು ರಶೀದಿ ಪುಸ್ತಕದ ಕೊರತೆಯನ್ನು ಎದುರಿಸುತ್ತಿದ್ದು, ಪಂಚಾಯತ್ಗಳ ಸಂಪನ್ಮೂಲ ಕ್ರೋಢಿಕರಣ ಕುಂಠಿತಗೊಳ್ಳುತ್ತಿರುವ ಬಗ್ಗೆ ತಿಳಿದು ಬಂದಿದೆ.
ಕ.ಪಂ.ರಾ (ಗ್ರಾ.ಪಂ ತೆರಿಗೆಗಳು ಹಾಗೂ ಫೀಜುಗಳು) ನಿಯಮಗಳು 1994ರಂತೆ ಜಿ.ಪಂಚಾಯತ್ನಿಂದ ರಶೀದಿಗಳ ವಿತರಣೆಯಾಗಬೇಕು. ಗ್ರಾ.ಪಂಚಾಯತ್ಗೆ ಕಟ್ಟಡ ಶುಲ್ಕ, ಮನೆ ತೆರಿಗೆ, ನೀರಿನ ದಂಡ, ಜಾಹೀರಾತು ಶುಲ್ಕ ಇತ್ಯಾದಿಗಳಿಗೆ ತೆರಿಗೆ ರಶೀದಿ ಪುಸ್ತಕಗಳ ಅವಶ್ಯಕತೆಯಿದೆ. ಮಾರ್ಚ್ ತಿಂಗಳಿನಲ್ಲಿ ಮನೆ ತೆರಿಗೆ ಅತ್ಯಧಿಕ ಮಟ್ಟದಲ್ಲಿ ಸಂಗ್ರಹವಾಗುವುದರಿಂದ ಈ ಸಂದರ್ಭದಲ್ಲಿ ರಶೀದಿ ಪುಸ್ತಕ ಇಲ್ಲದಿದ್ದಲ್ಲಿ ಸಂಪನ್ಮೂಲ ಕ್ರೋಢಿಕರಣ ಅಸಾಧ್ಯವಾಗಿದೆ. ಆದರೆ ರಶೀದಿ ಪುಸ್ತಕವೇ ಇಲ್ಲದಿದ್ದಲ್ಲಿ ಪಂಚಾಯತ್ನ ಆರ್ಥಿಕತೆ ಕುಗ್ಗುವ ಸಂಭವವಿದೆ ಮತ್ತು ನಿರ್ದಿಷ್ಠ ಗುರಿಯನ್ನು ತಲುಪಲು ಕಷ್ಟ ಸಾಧ್ಯವಾಗುತ್ತದೆ. ನೀರಿನ ಸಂಪರ್ಕ ಶುಲ್ಕ ಹಾಗೂ ತೆರಿಗೆಯನ್ನು ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸುತ್ತಿದ್ದು ಸದ್ರಿ ನೀರಿನ ತೆರಿಗೆ ಸಂಗ್ರಹ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಬೇಸಿಗೆ ಕಾಲವಾದುದರಿಂದ ಪಂಪ್ ದುರಸ್ಥಿಗಳಿಗೆ ಅಡಚಣೆಯಾಗುತ್ತಿದೆ. ಸರಕಾರದಿಂದ ಯಾವುದೇ ರೀತಿಯ ಕುಡಿಯುವ ನೀರಿಗಾಗಿ ಅನುದಾನ ಲಭ್ಯವಿರುವುದಿಲ್ಲ.
ಜಿ.ಪಂಚಾಯತ್ನ ಬೇಜವಾಬ್ದಾರಿಯಿಂದಾಗಿ ಇಡೀ ಜಿಲ್ಲೆಯಲ್ಲೇ ರಶೀದಿ ಪುಸ್ತಕದ ಕೊರತೆಯಿಂದ ಗ್ರಾ.ಪಂಗಳ ಆಡಳಿತದಲ್ಲಿ ಹದತಪ್ಪಿದ್ದು ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಪಂಚಾಯತ್ನ ಅಧಿಕಾರಿಗಳದ್ದಾಗಿದೆ. ಇಷ್ಟು ವರ್ಷಗಳಲ್ಲಿ ಜಿಲ್ಲೆಯಲ್ಲಿ ರಶೀದಿ ಪುಸ್ತಕದ ಕೊರತೆ ಇರಲಿಲ್ಲ. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕೊರತೆಯಾಗಿದ್ದರಿಂದ ಪಂಚಾಯತ್ ಆಡಳಿತ ವ್ಯವಸ್ಥೆ ಕುಸಿಯುವ ಭೀತಿ ಪಂಚಾಯತ್ ವಲಯದಲ್ಲಿ ಉಂಟಾಗಿದ್ದು ಈ ಬಗ್ಗೆ ಜಿ.ಪಂ ಅಧಿಕಾರಿಗಳು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ.
* ತೆರಿಗೆ ರಶೀದಿ ಪುಸ್ತಕಗಳ ಸಮಸ್ಯೆ ಸ್ವಲ್ಪ ದಿನ ಇತ್ತು. ಆದರೆ ಇದೀಗ ಎಲ್ಲಾ ಪಂಚಾಯತುಗಳಿಗೆ ಸರಬರಾಜು ಮಾಡಲಾಗಿದೆ. ರಶೀದಿ ಪುಸ್ತಕದ ಸಮಸ್ಯೆಯಿದ್ದರೂ "ಇ ವಾವತಿಯ" ಮೂಲಕ ರಶೀದಿಯನ್ನು ನೀಡಲು ಅವಕಾಶವಿದೆ- ಶ್ರೀವಿದ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರು.
ಜಿ.ಪಂಚಾಯತ್ ನೀಡುವ 1 ರಶೀದಿ ಪುಸ್ತಕದಲ್ಲಿ 50 ರಶೀದಿಗಳಿರುತ್ತವೆ. ಎಲ್ಲಾ ತೆರಿಗೆ ಮಾವತಿಗೆ ಮಾರ್ಚ್ ತಿಂಗಳು ಕೊನೆಯಾಗಿರುವುದರಿಂದ ಹೆಚ್ಚಿನ ಜನರು ತೆರಿಗೆಗಳನ್ನು ಪಾವತಿಸುತ್ತಾರೆ. ಜಿ.ಪಂ ಪಂಚಾಯತ್ ಗ್ರಾ.ಪಂಚಾಯತ್ಗಳಿಗೆ ಒಂದೆರಡು ರಶೀದಿ ಪುಸ್ತಕಗಳನ್ನು ನೀಡಿದರೆ ಯಾವುದಕ್ಕೂ ಸಾಲುವುದಿಲ್ಲ. ಪಂಚತಂತ್ರದಲ್ಲಿ ಹೆಸರು ಸೇರ್ಪಡೆಗೊಂಡಿರದಿದ್ದರೆ "ಇ ಪಾವತಿ"ಯಲ್ಲಿ ತೆರಿಗೆ ರಶೀದಿ ನೀಡಲು ಅವಕಾಶವಿರುವುದಿಲ್ಲ. ನೀರಿನ ಕನೆಕ್ಷನ್ ಮತ್ತು ಕಟ್ಟಡ ಪರವಾನಿಗೆ ನೀಡುವ ಬಗ್ಗೆ ಪಂಚತಂತ್ರದಲ್ಲಿ ಸೇರ್ಪಡೆಗೊಂಡಿಲ್ಲ. ಅಲ್ಲದೆ ಗ್ರಾ.ಪಂಚಾಯತ್ಗಳಲ್ಲಿ ಇನ್ನೂ ಕೂಡಾ ಪಂಚತಂತ್ರ ಸಾಪ್ಟ್ವೇರ್ ಉನ್ನತಿಕರಿಸದಿರುವುದರಿಂದ ಸಮಸ್ಯೆಗಳು ಮತ್ತೆ ಎದುರಾಗುತ್ತವೆ. ಇದಲ್ಲದೆ "ಇ ಪಾವತಿ"ಯಲ್ಲಿ ನೀಡುವ ಮುದ್ರಣ ರಶೀದಿಯು ಕಾರ್ಬನ್ನಂತಿದ್ದು ಉತ್ತಮ ಗುಣಮಟ್ಟವನ್ನು ಹೊಂದಿಲ್ಲದಿರುವುದರಿಂದ ಮುದ್ರಣಗೊಂಡಿರುವ ರಶೀದಿಯ ಅಕ್ಷರಗಳು 2 ದಿನಗಳಲ್ಲಿಯೇ ಅಳಿಸಿ ಹೋಗುವ ಸಾಧ್ಯತೆಯಿದ್ದು ಮುಂದೆ ಮತ್ತೊಂದು ತೊಂದರೆಗೆ ಇದು ಕಾರಣವಾಗುವ ಸಾಧ್ಯತೆಯಿದೆ ಎಂಬುದನ್ನು ಅಧಿಕಾರಿಗಳು ತಿಳಿಯಬೇಕಾಗಿದೆ