'ಪಕ್ಷದ ಅಸ್ತಿತ್ವಕ್ಕಾಗಿ ಸ್ಪರ್ಧೆಯೇ ಹೊರತು ಬಿಜೆಪಿಗೆ ನೆರವಾಗಲಲ್ಲ'
ದ.ಕ.ಜಿಲ್ಲೆಯ 4 ನಾಲ್ಕು ಕಡೆ ಸಿಪಿಎಂ ಸ್ಪರ್ಧೆ
ಮಂಗಳೂರು, ಎ.2: ಪಕ್ಷದ ಅಸ್ತಿತ್ವಕ್ಕಾಗಿ ಸ್ಪರ್ಧೆ ಮಾಡಲಾಗುತ್ತದೆಯೇ ವಿನಃ ಬಿಜೆಪಿಗೆ ನೆರವಾಗಲು ಸ್ಪರ್ಧಿಸುವುದಲ್ಲ ಎಂದು ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಪೈಕಿ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಸ್ಪರ್ಧೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿರುವ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಪಕ್ಷವು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ಪ್ರಬಲವಾಗಿತ್ತು. ಪಕ್ಷದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಆದರೆ, ಬದಲಾದ ರಾಜಕೀಯ ಸ್ಥಿತಿಗತಿ, ಚುನಾವಣಾ ತಂತ್ರಗಾರಿಕೆ, ಹಣದ ಹೊಳೆಯಿಂದ ಪಕ್ಷಕ್ಕೆ ಕೆಲವು ಕಡೆ ಹಿನ್ನಡೆಯಾಗಿದೆ. ಹಾಗಂತ ಪಕ್ಷದ ಸಂಘಟನೆ ಕುಂಠಿತಗೊಂಡಿಲ್ಲ. ಜಿಲ್ಲೆಯ ನಾಲ್ಕು ಕಡೆ ಪಕ್ಷದ ಕಾರ್ಯಕರ್ತರ ಶಕ್ತಿ ಅಧಿಕವಿದ್ದು ಅಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಈ ನಿಟ್ಟಿನಲ್ಲಿ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಲಾಗಿದೆ ಎಂದರು.
ಪಕ್ಷದ ಕಳೆದ ಹಲವು ವರ್ಷದಿಂದ ಅನೇಕ ಜನಪರ ಹೋರಾಟ-ಚಳವಳಿಯನ್ನು ರೂಪಿಸಿದೆ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಡಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ನಾಲ್ಕು ಕಡೆ ಸ್ಪರ್ಧಿಸುತ್ತಿದೆ. ಅಲ್ಲದೆ ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬದ್ಧವಾಗಿದೆ. ಇನ್ನು ಸ್ಪರ್ಧಿಸದೆ ಉಳಿದಿರುವ ನಾಲ್ಕು ಕಡೆ ಯಾರನ್ನು ಬೆಂಬಲಿಸಬೇಕು ಎಂದು ಪಕ್ಷದ ಕೇಂದ್ರ ಮತ್ತು ರಾಜ್ಯ ಸಮಿತಿಯ ನಿರ್ದೇಶನದಂತೆ ನಿರ್ಧರಿಸಲಾಗುತ್ತದೆ ಎಂದು ವಸಂತ ಆಚಾರಿ ತಿಳಿಸಿದರು.
ಪಕ್ಷದ ಸದಸ್ಯರು ಮತ್ತು ಅಭಿಮಾನಿಗಳು ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿರುವವರಿಗೆ ಮಾನ್ಯತೆ ನೀಡಬಾರದೆಂದು ನಂತಿಸುತ್ತಿದ್ದೇವೆ.