ಕಾಮನ್ ವೆಲ್ತ್: ಬೆಳ್ಳಿ ಗೆದ್ದ ಗುರುರಾಜ್ ಮನೆಯಲ್ಲಿ ಹಬ್ಬದ ವಾತಾವರಣ
ಸಾಧಕ ಪುತ್ರನ ಬಗ್ಗೆ ತಂದೆ ಮಹಾಬಲ ಪೂಜಾರಿ ಹೇಳಿದ್ದೇನು?
ಕುಂದಾಪುರ, ಎ.5: ಆಸ್ಟ್ರೇಲಿಯ ಗೋಲ್ಡ್ಕೋಸ್ಟ್ನಲ್ಲಿ ಇಂದು ಪ್ರಾರಂಭಗೊಂಡ 21ನೇ ಕಾಮನ್ವೆಲ್ತ್ ಗೇಮ್ಸ್ನ ವೆಯ್ಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶಕ್ಕೆ ಚೊಚ್ಚಲ ಪದಕವನ್ನು ಗೆದ್ದುಕೊಟ್ಟ ಕುಂದಾಪುರದ ಹೆಮ್ಮೆಯ ಕ್ರೀಡಾಪ್ರತಿಭೆ ಗುರುರಾಜ್ ಪಿ. ಅವರ ವಂಡ್ಸೆ ಜೆಡ್ಡು ಮನೆಯಲ್ಲಿ ಇಂದು ಹರ್ಷದ ಹೊನಲು ಹರಿದಿತ್ತು.
ಸುದ್ದಿ ತಿಳಿದ ಊರು-ಪರವೂರಿನ ಪರಿಚಿತರು-ಅಪರಿಚಿತರು ಹಾಗು ದೂರದ ಉಡುಪಿ ಮತ್ತು ಇತರ ಕಡೆಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಟಿವಿ ಚಾನೆಲ್ಗಳ ಪ್ರತಿನಿಧಿಗಳ ದಂಡೇ ಮನೆಗೆ ಮುತ್ತಿಗೆ ಹಾಕಿತ್ತು ಎಂದು ಮಗನ ಸಾಧನೆಯಿಂದ ಬೀಗುತಿದ್ದ ಮಹಾಬಲ ಪೂಜಾರಿ ಹೆಮ್ಮೆಯಿಂದ ಹೇಳಿಕೊಂಡರು.
“ಇಂದು ಬೆಳಗ್ಗಿನಿಂದ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿತ್ತು” ಎಂದು ಮಹಾಬಲ ಪೂಜಾರಿ ಹೇಳುತ್ತಾರೆ. ಭಾರತೀಯರು ಇಂದು ಮುಂಜಾನೆ ಹಾಸಿಗೆ ಬಿಟ್ಟು ಏಳುವಷ್ಟರಲ್ಲಿ ಗುರುರಾಜ್ ಪಿ. ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯ 56 ಕೆ.ಜಿ.ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮಾಹಿತಿಯ ಕಂಪು ಎಲ್ಲಾ ಕಡೆ ಹಬ್ಬಿಯಾಗಿತ್ತು. “ಕುಂದಾಪುರದಿಂದ ಕೊಲ್ಲೂರಿಗೆ ತೆರಳುವ ಮಾರ್ಗದ ವಂಡ್ಸೆ ಪೇಟೆಯಿಂದ ಮೂರು ಕಿ.ಮೀ.ದಲ್ಲಿರುವ ಮನೆಯಲ್ಲಿದ್ದ ನಾವೆಲ್ಲರೂ ಗುರುರಾಜ ಪದಕ ಗೆದ್ದೇ ಗೆಲ್ಲುತ್ತಾನೆಂಬ ವಿಶ್ವಾಸದಿಂದ ಈ ಸಾಧನೆಯನ್ನು ಕಣ್ತುಂಬಿಕೊಳ್ಳಲು ನಾಲ್ಕು ಗಂಟೆಯಿಂದಲೇ ಟಿವಿ ಎದುರು ಕುಳಿತಿದ್ದೆವು” ಎಂದವರು ವಿವರಿಸುತ್ತಾರೆ.
2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್ ವೆಲ್ತ್ ವೆಯ್ಟ್ಲಿಫ್ಟಿಂಗ್ ಸ್ಪರ್ಧೆಯ 56 ಕೆ.ಜಿ.ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಗುರುರಾಜ್ ಈ ಬಾರಿಯೂ ಚಿನ್ನವನ್ನು ಉಳಿಸಿಕೊಳ್ಳುವ ವಿಶ್ವಾಸವಿತ್ತಾದರೂ, ಕಳೆದ ಬಾರಿಯ ಸಾಧನೆಯನ್ನು ಪುನರಾವರ್ತಿಸಿದರೂ ಗೋಲ್ಟ್ಕೋಸ್ಟ್ನಲ್ಲಿ ಅವರಿಗೆ ಬೆಳ್ಳಿಯ ಪದಕವನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಚಿನ್ನ ಕೈತಪ್ಪಿದ ನಿರಾಸೆ ಇದ್ದರೂ ಮಗನ ಸಾಧನೆ ಯಿಂದ ನಮಗೆ ತುಂಬಾ ಖುಷಿಯಾಗಿದೆ. ಕ್ರೀಡೆಯ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ, ತಾಯಿ ಪದ್ದು ಪೂಜಾರಿಗೆ ಮಗನ ಸಾಧನೆಯಿಂದ ಹೆಮ್ಮೆಯಾಗಿದೆ ಎಂದೂ ಮಹಾಬಲ ಪೂಜಾರಿ ತಿಳಿಸಿದರು.
ವಂಡ್ಸೆ ಸಮೀಪದ ಜೆಡ್ಡು ನಿವಾಸಿ, ವಂಡ್ಸೆಯಲ್ಲಿ ಪಿಕಪ್ ವಾಹನ ಚಾಲಕರಾಗಿರುವ ಮಹಾಬಲ ಪೂಜಾರಿ ಅವರ ಆರು ಮಂದಿ ಪುತ್ರರಲ್ಲಿ 5ನೆಯವರಾದ ಗುರುರಾಜ ಪೂಜಾರಿ, ಬಡತನದ ಬೇಗೆಯಲ್ಲಿ ಪ್ರತಿಭೆಯ ಮೂಲಕ ಅರಳಿ ಬೆಳೆದವರು. ವಂಡ್ಸೆ ಹಾಗೂ ಕೊಲ್ಲೂರಿನ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ಗುರುರಾಜ್, ಮೊದಲ ಆಸಕ್ತಿ ಕ್ರೀಡೆ ಕಬಡ್ಡಿ ಹಾಗೂ ಕುಸ್ತಿಯಾಗಿತ್ತು. ಸುಶೀಲ್ ಕುಮಾರ್ ಅವರ ಕುಸ್ತಿಯನ್ನು ನೋಡಿ ಅದರಿಂದ ಸ್ಪೂರ್ತಿ ಪಡೆದಿದ್ದ ಗುರುರಾಜ್, ಪದವಿ ಓದಿಗಾಗಿ ಉಜಿರೆಯ ಎಸ್ಡಿಎಂ ಕಾಲೇಜು ಸೇರಿದಾಗ ಬದುಕಿನ ಚಿತ್ರಣವೇ ಬದಲಾಯಿತು.
ಎಸ್ಡಿಎಂ ಕಾಲೇಜಿನ ಕೋಚ್ ರಾಜೇಂದ್ರಪ್ರಸಾದ್ ಅವರು ಗುರುರಾಜ್ ರನ್ನು ವೆಯ್ಟ್ ಲಿಫ್ಟಿಂಗ್ನತ್ತ ಸೆಳೆದು ಅದರಲ್ಲೇ ದೊಡ್ಡ ಸಾಧನೆಗೆ ಪ್ರೇರೇಪಿಸಿದರು. ಅದೇ ಅವಧಿಯಲ್ಲಿ ಗೂಡ್ಸ್ ಟೆಂಪೊ ಚಾಲಕರಾಗಿದ್ದ ತಂದೆಯವರ ಬದುಕಿನಲ್ಲಾದ ಅವಘಡ ಅವರನ್ನು ಮನೆಯಲ್ಲಿ ಆಗಿದ್ದ ಸಂಕಷ್ಟ ನಿವಾರಣೆಗೆ ಕ್ರೀಡೆಯನ್ನು ನೆಚ್ಚಿಕೊಳ್ಳುವ ದೃಢಸಂಕಲ್ಪ ಮಾಡುವಂತೆ ಮಾಡಿತು. ಕ್ರೀಡಾಕ್ಷೇತ್ರದಲ್ಲಿ ತಾನು ಮಾಡುವ ಉನ್ನತ ಸಾಧನೆಯಿಂದ ಮನೆಯ ಪರಿಸ್ಥಿತಿ ಉತ್ತಮಗೊಳ್ಳಬಹುದೆಂದು ಅವರು ವೆಯ್ಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಾಧನೆಗೆ ಮುಂದಾದರು. ಇದರಿಂದ ಅವರಿಗೆ ಇಂಡಿಯನ್ ಏರ್ಪೋರ್ಸ್ನಲ್ಲಿ ನೌಕರಿಯೂ ದೊರಕಿತು.
1992ರ ಆಗಸ್ಟ್ 15ರಂದು ಜನಿಸಿದ 26ರ ಹರೆಯದ ಗುರುರಾಜ್, ವೆಯ್ಟ್ಪಿಲ್ಟಿಂಗ್ನ 56 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿ ಈಗಾಗಲೇ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ, ಪದಕಗಳನ್ನು ಜಯಿಸಿದ್ದಾರೆ. 2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನ ವೆಯ್ಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಜಯಿಸಿದ ಅವರು, ಇದಕ್ಕೂ ಮೊದಲು ದಕ್ಷಿಣ ಏಷ್ಯ ಗೇಮ್ಸ್ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಗುರುರಾಜ್ ಈ ಬಾರಿ ಸ್ನಾಚ್ನಲ್ಲಿ 111 ಹಾಗೂ ಕ್ಲೀನ್ ಎಂಡ್ ಜರ್ಕ್ ನಲ್ಲಿ 138 ಕೆ.ಜಿ.ಸೇರಿದಂತೆ ಒಟ್ಟು 249ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಪಡೆದರು. ಆದರೆ 2016ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ 108+141ಕೆ.ಜಿ. ಒಟ್ಟು 249ಕೆ.ಜಿ. ಭಾರ ಎತ್ತಿ ಚಿನ್ನ ಜಯಿಸಿದ್ದರು. ಈ ಸಲದ ಚಿನ್ನ 117+144 ಕೆ.ಜಿ. ಒಟ್ಟು 261ಕೆ.ಜಿ. ಭಾರ ಎತ್ತಿದ ಮಲೇಷ್ಯಾ ಸ್ಪರ್ಧಿಯ ಪಾಲಾಯಿತು.
ನಿರಾಶೆಯಲ್ಲೂ ಖುಷಿ ಹಂಚಿಕೊಂಡ ಗುರುರಾಜ್
ಗೋಲ್ಟ್ಕೋಸ್ಟ್ನಲ್ಲಿ ಬೆಳ್ಳಿ ಪದಕ ಜಯಿಸಿದ ಗುರುರಾಜ್, ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಮನೆಗೆ ದೂರವಾಣಿ ಕರೆ ಮಾಡಿ ತಮ್ಮೊಂದಿಗೆಲ್ಲ ಮಾತನಾಡಿ ಪದಕ ಗೆದ್ಜ ಖುಷಿಯನ್ನು ಹಂಚಿಕೊಂಡ ಎಂದು ತಂದೆ ಮಹಾಬಲ ಪೂಜಾರಿ ತಿಳಿಸಿದರು. ಈ ಸಲ ಚಿನ್ನದ ಪದಕ ಗೆಲ್ಲದ ಬಗ್ಗೆ ಆತನ ಮಾತಿನಲ್ಲಿ ನಿರಾಶೆ ಇದ್ದರೂ, ಸಾಧನೆಗಾಗಿ ಹೆಮ್ಮೆ ಪಟ್ಟ ಎಂದವರು ನುಡಿದರು. ಬೆಳಗ್ಗೆ ಕರೆ ಮಾಡಿದಾಗ ತಾಯಿ, ಸಹೋದರ, ಅತ್ತಿಗೆ ಎಲ್ಲರೊಂದಿಗೂ ಮಾತನಾಡಿದ. ನಾವು ಆತನ ಸಾಧನೆಯ ಬಗ್ಗೆ ನಮಗಾದ ಸಂತೋಷವನ್ನು ತಿಳಿಸಿದೆವು. ನಾವೀಗ ಆತ ಊರಿಗೆ ಬರುವ ಬಗ್ಗೆ ಕಾತರರಾಗಿದ್ದೇವೆ ಎಂದು ಮಹಾಬಲ ಪೂಜಾರಿ ತಿಳಿಸಿದರು.
ಪ್ರತಿದಿನ ಸಂಜೆ ಆತ ಆಸ್ಟ್ರೇಲಿಯದಿಂದ ಕರೆ ಮಾಡುತ್ತಾನೆ. ಇಂದು ಸಂಜೆ ಕರೆ ಬಂದಾಗ ಆತ ಯಾವಾಗ ದೇಶಕ್ಕೆ ಹಾಗೂ ಊರಿಗೆ ಬರುತ್ತಾನೆ ಎಂಬ ಬಗ್ಗೆ ವಿಚಾರಿಸುತ್ತೇವೆ ಎಂದು ಮಗನ ಸಾಧನೆಯಿಂದ ರೋಮಾಂಚಿತ ರಾಗಿರುವ ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆ
21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಚೊಚ್ಚಲ ಪದಕವನ್ನು ಗೆದ್ದುಕೊಟ್ಟ ಗುರುರಾಜ್ ಪೂಜಾರಿ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಟ್ವಿಟರ್ನಲ್ಲಿ ನೂರಾರು ಮಂದಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಮುಂಜಾನೆಯೇ ಟ್ವೀಟ್ ಮಾಡಿದ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, “ನಾವೀಗ ಮೊದಲ ಪದಕ ಗೆದ್ದಿದ್ದೇವೆ. ಅಭಿನಂದನೆಗಳು ಗುರುರಾಜ್, ಸ್ಪರ್ಧೆಯಲ್ಲಿ ಎರಡನೇ ಸ್ಥಾನಿಯಾಗಿ ಪದಕ ಗೆದ್ದಿರುವುದಕ್ಕೆ. ಪುರುಷರ 56 ಕೆ.ಜಿ.ವಿಭಾಗದ ವೆಯ್ಟ್ ಲಿಫ್ಟಿಂಗ್ನಲ್ಲಿ ಒಟ್ಟು 249 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ. ನಿಮ್ಮ ಕುರಿತು ನಮಗೆ ಹೆಮ್ಮೆಯಿದೆ ಗುರುರಾಜ್!” ಎಂದಿದ್ದಾರೆ.
ಅದೇ ರೀತಿ ಕ್ರಿಕೆಟಿಗ ಇಶಾಂತ್ ಶರ್ಮ ಹಾಗೂ ಇತರರು ಟ್ವಿಟರ್ ಮೂಲಕ ಗುರುರಾಜ್ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.