ಉಡುಪಿ, ಕಾರ್ಕಳದಲ್ಲಿ ತುಳುನಾಡು ಪಕ್ಷ ಸ್ಪರ್ಧೆ
ಉಡುಪಿ, ಎ.18: ರಾಷ್ಟ್ರೀಯ ಪಕ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿರುವ ತುಳು ನಾಡನ್ನು ಉಳಿಸುವ ನಿಟ್ಟಿನಲ್ಲಿ ಸ್ವತಂತ್ರ ತುಳುನಾಡು ಪಕ್ಷವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಉಡುಪಿ ಹಾಗೂ ಕಾರ್ಕಳ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್ದಾಸ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸುದರ್ಶನ್ ಪೂಜಾರಿ ಹಾಗೂ ಕಾರ್ಕಳ ಕ್ಷೇತ್ರದಿಂದ ಸುಮಂತ್ ಕೆ.ಪೂಜಾರಿ ಸ್ಪರ್ಧಿಸಲಿದ್ದು, ಎರಡು ದಿನಗಳಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗುವುದು. ಉಳಿದ ಕ್ಷೇತ್ರಗಳಲ್ಲಿ ಸಮಾನಮನಸ್ಕರ ಜೊತೆಗೂಡಿ ಸ್ಪರ್ಧಿಸಲಾಗುವುದು ಎಂದರು.
ತುಳುನಾಡಿನ ನೆಲಜಲ ಉಳಿವು, ಭಾಷೆಯ ಸ್ಥಾನಮಾನ, ಸಮಗ್ರ ಅಭಿವೃದ್ಧಿ ಮತ್ತು ಮೂಲ ಸಂಸ್ಕೃತಿಯ ಪುನರುತ್ಥಾನ ಹಾಗೂ ಶಾಂತಿ ನೆಮ್ಮದಿ ಸಮೃದ್ಧ, ಸೌರ್ಹಾದ ತುಳುನಾಡು ರಾಜ್ಯ ರಚನೆಗಾಗಿ ಪಕ್ಷವು ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕೆ ಇಳಿಸಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಪಕ್ಷಗಳು ತುಳುನಾಡಿಗೆ, ತುಳು ಭಾಷೆಗೆ ಸ್ಥಾನಮಾನ ಒದಗಿಸು ವಲ್ಲಿ ವಿಫಲವಾಗಿದ್ದು, ತುಳುನಾಡಿನಲ್ಲಿರುವ ರಾಜಕೀಯ ಪಕ್ಷಗಳ ಜನಪ್ರತಿನಿಧಿ ಗಳು ಹೈಕಮಾಂಡಿನ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ. ಇದರ ಪರಿಣಾಮ ವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತುಳುನಾಡನ್ನು ನಿರ್ಲಕ್ಷಿಸುತ್ತಿವೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಉಡುಪಿ ಅಭ್ಯರ್ಥಿ ಸುದರ್ಶನ ಪೂಜಾರಿ, ಮುಖಂಡರಾದ ಪ್ರಶಾಂತ್ ಎಂ., ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.