ಬೆಂಗಳೂರು: ಎ. 28ರಂದು ‘ಕರ್ನಾಟಕ ಮುಸ್ಲಿಂ ಜಮಾಅತ್’ಗೆ ಚಾಲನೆ
ಮಂಗಳೂರು, ಎ. 19: ರಾಜ್ಯದ ಬಹು ನಿರೀಕ್ಷಿತ ಮುಸ್ಲಿಂ ಬಹುಜನ ಸಂಘಟನೆ ‘ಕರ್ನಾಟಕ ಮುಸ್ಲಿಂ ಜಮಾಅತ್’ ಇದರ ರಾಜ್ಯ ಮಟ್ಟದ ಚಾಲನಾ ಸಮಾವೇಶವು ಎ. 28ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಇಶಾರ ಪತ್ರಿಕೆಯ ಸಂಪಾದಕ ಅಬ್ದುಲ್ ಹಮೀದ್ ಬಜಪೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಮುಸ್ಲಿಂ ಉಲೆಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಆಲ್ ಇಂಡಿಯಾ ಮುಸ್ಲಿಂ ಜಮಾಅತ್ನ ಮುಂದಾಳು ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ಸಂಘಟನಾ ಪ್ರತಿನಿಧಿಗಳ ಸಮ್ಮುಖದಲ್ಲಿ ಸಂಘಟನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದಲ್ಲಿ ಅಹ್ಲುಸ್ಸುನ್ನತಿ ವಲ್ ಜಮಾಅತಿನ ತತ್ವಾದರ್ಶಗಳಿಗೆ ಬದ್ಧವಾಗಿ ಮುಸ್ಲಿಂ ವಿದ್ಯಾರ್ಥಿ ಶಕ್ತಿಯನ್ನು ಸಂಘಟಿಸಲು ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಹಾಗೂ ಯುನಜನರಿಗಾಗಿ ಸುನ್ನೀ ಯುವಜನ ಸಂಘ (ಎಸ್. ವೈ.ಎಸ್.)ಗಳು ರಾಜ್ಯದಲ್ಲಿ ಕಳೆದ ಎರಡುವರೆ ದಶಕಗಳಿಂದ ಕಾರ್ಯಾಚರಿಸುತ್ತಿದ್ದು ಇದೀಗ ಮುಸ್ಲಿಂ ಸಮಾಜದ ಸಾಮಾಜಿಕ ಹಾಗೂ ಇನ್ನಿತರ ಕ್ಷೇತ್ರ ಗಳಲ್ಲಿ ಕ್ರಾಂತಿಕಾರಕ ಯೋಜನೆಗಳೊಂದಿಗೆ ಸಮುದಾಯದ ಬಹುಜನರ ಕ್ರಿಯಾ ವೇದಿಕೆಯಾಗಿ ಮುಸ್ಲಿಂ ಜಮಾಅತ್ ರಂಗಕ್ಕಿಳಿಯಲಿದೆ ಎಂದು ಹಮೀದ್ ಬಜ್ಪೆ ಹೇಳಿದರು.
ಈಗಾಗಲೇ ಕೇರಳ, ತುಳುನಾಡು, ಕಾಶ್ಮೀರ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮುಸ್ಲಿಂ ಜಮಾಅತ್ ಸಕ್ರಿಯವಾಗಿ ಕಾರ್ಯನಿರ್ವಸುತ್ತಿದೆ. ಶೀಘ್ರವಾಗಿ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಿ ಆಯ್ದ ಕೌನ್ಸಿಲ್ ಮೂಲಕ ಅಧಿಕೃತ ರಾಜ್ಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು. ಚಾಲನಾ ಸಮಾವೇಶದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ, ಎಸ್.ವೈ.ಎಸ್., ಎಸ್ಸೆಸ್ಸೆಫ್, ಜಂಇಯ್ಯತುಲ್ ಮುಅಲ್ಲಿಮೀನ್, ಎಸ್.ಇ.ಡಿ.ಸಿ., ಎಸ್.ಎಂ.ಎ. ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರತಿನಿಧಿಗಳು ಭಾಗವಸಲಿದ್ದಾರೆ ಎಂದು ಅವರು ವಿವರಿಸಿದರು.
ಸುನ್ನಿ ಕೋ ಆರ್ಡಿನೇಶನ್ ಸಮಿತಿಯ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಮುಸ್ಲಿಂ ಜಮಾಅತ್ನ ಕೆ.ಎಚ್.ಇಸ್ಮಾಯಿಲ್ ಸಅದಿ, ಎಸ್ವೈಎಸ್ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಕಿನಾರ, ಹನೀಫ್ ಹಾಜಿ ಉಳ್ಳಾಲ ಉಪಸ್ಥಿತರಿದ್ದರು.