ಮೂಡುಬಿದಿರೆ ಕ್ಷೇತ್ರ ಜೆಡಿಎಸ್ ಅಭ್ಯರ್ಥಿಯಾಗಿ ಜೀವನ್ ಕೆ. ಶೆಟ್ಟಿ
ಕಣದಲ್ಲಿ ತಾನಿಲ್ಲ: ಅಮರನಾಥ ಶೆಟ್ಟಿ ಸ್ಪಷ್ಟನೆ
ಮೂಡುಬಿದಿರೆ, ಎ. 20: ಮುಲ್ಕಿಯ ಸಿವಿಲ್ ಎಂಜಿನಿಯರ್ ಜೀವನ್ ಕೆ. ಶೆಟ್ಟಿ ಅವರು ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎ. 23ರಂದು ಮೂಡಬಿದಿರೆ ಚುನಾವಣಾಧಿಕಾರಿಯವರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ತಿಳಿಸಿದ್ದಾರೆ.
ಜಾತ್ಯತೀತ ಜನತಾ ದಳದ ಸಕ್ರಿಯ ಕಾರ್ಯಕರ್ತರಾಗಿರುವ ಜೀವನ್ ಕೆ. ಶೆಟ್ಟಿ ಅವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ ಹಾಗೂ ಕನ್ಸ್ಸ್ಟ್ರಕ್ಷನ್ ಟೆಕ್ನಾಲಜಿಯಲ್ಲಿ ಎಂಟೆಕ್ ಪದವಿ ಗಳಿಸಿದವರು. ಶಾರದಾ ಇನ್ಫ್ರಾ ಡಿಸೈನ್ ಸಂಸ್ಥೆಯ ಪ್ರವರ್ತಕರು.
ಸ್ಪರ್ಧಿಸುವುದಿಲ್ಲ: ಅಮರನಾಥ ಶೆಟ್ಟಿ
ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ಹೆಸರು ಮಾಧ್ಯಮಗಳ ಮೂಲಕ ಪ್ರಕಟವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮರನಾಥ ಶೆಟ್ಟಿ ಅವರು ‘ ನಾನು ಸ್ಪರ್ಧಿಸುವುದಿಲ್ಲ ಎಂದು ನಾಯಕರಿಗೆ ಸ್ಪಷ್ಟಪಡಿಸಿದ್ದೇನೆ. ನಾಯಕರ ಒತ್ತಾಯ ಇದ್ದದ್ದು ನಿಜ, ಆದರೆ ನಾನು ಕಣದಲ್ಲಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸೋಮವಾರ ಜೀವನ್ ಕೆ. ಶೆಟ್ಟಿ ಅವರು ನಾಮಪತ್ರ ಸಲ್ಲಿಸುವ ವೇಳೆಗೆ ಪಕ್ಷದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಅವರು ಮಾಧ್ಯಮ ಮೂಲಕ ವಿನಂತಿಸಿದರು.