ಅತ್ಯಾಚಾರ- ಕೊಲೆ ಪ್ರಕರಣ ಖಂಡಿಸಿ ಬೋಳಂತೂರಿನಲ್ಲಿ ಕಾಲ್ನಡಿಗೆ ಜಾಥಾ, ಪ್ರತಿಭಟನಾ ಸಭೆ
ಬಂಟ್ವಾಳ, ಎ. 21: ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ವತಿಯಿಂದ ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ- ಕೊಲೆ ಪ್ರಕರಣವನ್ನು ಖಂಡಿಸಿ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನಾ ಸಭೆ ಬೋಳಂತೂರಿನ ಎನ್.ಸಿ ರೋಡ್ನಲ್ಲಿ ಶನಿವಾರ ನಡೆಯಿತು.
ಕೊಕ್ಕಪುಣಿ ಜಂಕ್ಷನ್ನಿಂದ ಎನ್.ಸಿ. ರೋಡ್ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಸ್ಥಳೀಯ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಎನ್.ಸಿ ರೋಡ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಾರುಲ್ ಅಶ್ ಅರಿಯ್ಯದ ವಿದ್ಯಾರ್ಥಿ ಸಿದ್ದೀಕ್ ಮುಸ್ಲಿಯಾರ್, ದೇಶದಲ್ಲಿ ನಿರಂತರವಾಗಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿದೆ. ಹಣದ ಆಸೆಗಾಗಿ ಅಧಿಕಾರಿಗಳು ಅತ್ಯಾಚಾರಿಗಳಿಗೆ ಬೆಂಬಲ ನೀಡುವ ಮೂಲಕ ಕರ್ತವ್ಯ ಲೋಪ ಎಸೆಗುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ವಿಶ್ವವೇ ಭಾತರದತ್ತ ತಿರುಗಿ ನೋಡುತ್ತಿದೆ. ಮಾದಕ ದ್ರವ್ಯದ ಅಮಲಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದ ಅವರು ಅತ್ಯಾಚಾರ ಕೊಲೆ ಪ್ರಕರಣದ ದುಷ್ಕರ್ಮಿಗಳಿಗೆ ಕಠಿನ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಸುರಿಬೈಲು, ಅಲಿ ಮದನಿ ಸೆರ್ಕಳ, ಅಕ್ಬರ್ ಅಲಿ ಮದನಿ ಸೆರ್ಕಳ, ಕರೀಂ ಕದ್ಕರ್, ಜುನೈದ್ ಮುಸ್ಲಿಯಾರ್ ಆಲಡ್ಕ, ಮಜೀದ್ ಕದ್ಕರ್, ರಫೀಕ್ ಮಾಡದ ಬಳಿ, ಫಾರೂಕ್ ಬಿ.ಜೆ, ದಾವೂದ್ ಕಲ್ಪಣೆ, ಹಸೈನಾರ್ ಸೆರ್ಕಳ, ಶಾಫಿ ನಿರ್ಭೈಲ್, ಹುಸೈನರ್, ಕಾದರ್ ಕೆ.ಪಿ, ಅಬ್ಬಾಸ್ ಹಾಜಿ ಮೊದಲಾದವರು ಭಾಗವಹಿಸಿದ್ದರು.