ದ.ಕ.ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಸಂಸದ ನಳಿನ್ ವಿರುದ್ಧ ಭಾರೀ ಆಕ್ರೋಶ
ಪಕ್ಷೇತರರಾಗಿ ಸತ್ಯಜಿತ್ ಕಣಕ್ಕಿಳಿಯುವ ಸಾಧ್ಯತೆ
► ಬಂಟ ಸಮಾಜಕ್ಕೆ ಹೆಚ್ಚಿನ ಸ್ಥಾನ
► ಬಿಲ್ಲವರ ತೀವ್ರ ಕಡೆಗಣನೆ
► ಬಂಟರಿಗೆ 4, ಬಿಲ್ಲವರಿಗೆ ಕೇವಲ 1 ಟಿಕೆಟ್
ಮಂಗಳೂರು, ಎ.21: ಶಿಸ್ತಿನ ಪಕ್ಷ ಎಂದೇ ಬಿಂಬಿಸಲ್ಪಟ್ಟ ಬಿಜೆಪಿಯ ದ.ಕ. ಜಿಲ್ಲಾ ಘಟಕದಲ್ಲಿ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಸಂಬಂಧ ಅಸಮಾಧಾನ ಭುಗಿಲೆದ್ದಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಬಿಜೆಪಿಯು ಬಂಟ ಸಮುದಾಯಕ್ಕೆ 4 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದು, ಇದು ಕೂಡ ಬಿಲ್ಲವ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ದ.ಕ.ಜಿಲ್ಲೆಯ ಸುಳ್ಯ ಮೀಸಲು ಕ್ಷೇತ್ರದ ಹೊರತುಪಡಿಸಿ ಉಳಿದ 7 ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಂಟ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ, ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಉಳೆಪಾಡಿಗುತ್ತು, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ರ ಕೈವಾಡವಿದೆ ಎಂಬ ಆರೋಪ ವ್ಯಕ್ತವಾಗಿದೆ.
ಮಂಗಳೂರು ನಗರ ದಕ್ಷಿಣದಲ್ಲಿ ಕೊಂಕಣಿ ಸಮುದಾಯದ ವೇದವ್ಯಾಸ ಕಾಮತ್, ಮೂಡುಬಿದಿರೆಯಲ್ಲಿ ಬಿಲ್ಲವ ಸಮುದಾಯದ ಉಮನಾಥ ಕೋಟ್ಯಾನ್, ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯದ ಸಂಜೀವ ಮಠಂದೂರ್ಗೆ ಟಿಕೆಟ್ ನೀಡಲಾಗಿದ್ದು, ಇಲ್ಲೆಲ್ಲಾ ಟಿಕೆಟ್ ವಂಚಿತರು ಮತ್ತು ಬೆಂಬಲಿಗರಿಂದ ಅಸಮಾಧಾನ ವ್ಯಕ್ತವಾಗಿದೆ.
ದ.ಕ.ಜಿಲ್ಲೆಯ ಬಿಜೆಪಿಯಲ್ಲಿ ಬಿಲ್ಲವರು ಅಧಿಕ ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕನಿಷ್ಠ 3 ಸ್ಥಾನ ನೀಡಬೇಕು ಎಂಬುದು ಬಿಲ್ಲವರ ಆಗ್ರಹವಾಗಿತ್ತು. ಆದರೆ ಬಿಲ್ಲವರಿಗೆ ಸದ್ಯ ದಕ್ಕಿದ್ದು ಕೇವಲ 1 ಸ್ಥಾನ ಮಾತ್ರ. ಆ ಹಿನ್ನೆಲೆಯಲ್ಲಿ ಸಂಘಪರಿವಾರದ ಜೊತೆ ಗುರುತಿಸಿಕೊಂಡು ಪುಂಡಾಟಿಕೆ ಮಾಡಲು ಮಾತ್ರ ಬಿಲ್ಲವರಾ? ಎಂಬ ಪ್ರಶ್ನೆಯೊಂದಿಗೆ ನೋವಿನ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮಂಗಳೂರು ನಗರ ಉತ್ತರದಲ್ಲಿ ಕ್ಷತ್ರಿಯ ಸಮುದಾಯದ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಮಧ್ಯೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್ ಹಾಗೂ ಡಾ. ಭರತ್ ಶೆಟ್ಟಿ ಕೂಡಾ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಕೃಷ್ಣ ಪಾಲೆಮಾರ್ಗೆ ಟಿಕೆಟ್ ಖಚಿತ ಎಂದು ಬಿಂಬಿತವಾಗಿರುವ ಮಧ್ಯೆಯೇ ಅಚ್ಚರಿ ಎಂಬಂತೆ ಡಾ. ಭರತ್ ಶೆಟ್ಟಿಗೆ ಟಿಕೆಟ್ ಸಿಕ್ಕಿರುವುದರಿಂದ ಅಲ್ಲೀಗ ಬಂಡಾಯದ ಕಹಳೆ ಮೊಳಗಿದೆ. ಕೃಷ್ಣ ಪಾಲೆಮಾರ್ ಬಹಿರಂಗವಾಗಿ ಬಂಡಾಯ ಸಾರಿದ್ದಾರೆ. ಸತ್ಯಜಿತ್ ಸುರತ್ಕಲ್ ಕಾದು ನೋಡುವ ತಂತ್ರಕ್ಕೆ ಇಳಿದಿದ್ದು, ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರರಾಗಿ ಕಣಕ್ಕಿಳಿದರೆ ಅಚ್ಚರಿ ಇಲ್ಲ.
ಬೆಳ್ತಂಗಡಿಯಲ್ಲಿ ಬಂಟ ಸಮುದಾಯದ ಹರೀಶ್ ಪೂಂಜಾರಿಗೆ ಟಿಕೆಟ್ ನೀಡಿರುವುದು ಕೂಡ ವಿರೋಧ ವ್ಯಕ್ತವಾಗಿದೆ. ಅಲ್ಲಿ ಕಳೆದ ಬಾರಿಯ ಅಭ್ಯರ್ಥಿಯೂ ಆಗಿರುವ ಒಕ್ಕಲಿಗ ಸಮುದಾಯದ ರಂಜನ್ ಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಅವರು ಇದೀಗ ಒಳಗಿಂದೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು (ಉಳ್ಳಾಲ) ಕ್ಷೇತ್ರದ ಮೇಲೆ ಬಂಟ ಸಮುದಾಯದ ಸಂತೋಷ್ ಕುಮಾರ್ ರೈ ಮತ್ತು ಬಿಲ್ಲವ ಸಮುದಾಯದ ಸತೀಶ್ ಕುಂಪಲರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ನಡೆದಿತ್ತು. ನಮ್ಮಲ್ಲಿ ಟಿಕೆಟ್ ಯಾರಿಗೆ ನೀಡಿದರೂ ಕೂಡ ಪರಸ್ಪರ ಸಹಮತ ಇದೆ ಎಂದು ಇಬ್ಬರು ಆರಂಭದಲ್ಲಿ ಹೇಳಿಕೊಂಡಿದ್ದರೂ ಕೂಡಾ ಟಿಕೆಟ್ ತಪ್ಪಿದ ಕಾರಣ ಇದೀಗ ಸತೀಶ್ ಕುಂಪಲ ಒಳಗಿಂದೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮುಸ್ಲಿಮ್ ಬಾಹುಳ್ಯವಿರುವ ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂದು ಮಂದಿ ತೆರೆಮರೆಯ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಬಂಟ್ವಾಳದಲ್ಲಿ ನಿರೀಕ್ಷೆಯಂತೆ ಬಂಟ ಸಮುದಾಯದ ರಾಜೇಶ್ ನಾಯಕ್ ಉಳೆಪಾಡಿಗುತ್ತುಗೆ ಟಿಕೆಟ್ ನೀಡಲಾಗಿದೆ.
ಮಂಗಳೂರು ನಗರ ದಕ್ಷಿಣದಲ್ಲಿ ಕಳೆದ ಬಾರಿ ಜಿ ಎಸ್ ಬಿ ಸಮುದಾಯದ ಯೋಗಿಶ್ ಭಟ್ರಿಗೆ ಟಿಕೆಟ್ ನೀಡಿದ್ದರೆ ಈ ಬಾರಿ ಕೊಂಕಣಿ ಸಮುದಾಯದ ವೇದವ್ಯಾಸ ಕಾಮತ್ರಿಗೆ ಟಿಕೆಟ್ ನೀಡಿರುವುದು ಕೂಡಾ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲಿ ಅದೇ ಸಮುದಾಯದ ಬದ್ರಿನಾಥ ಕಾಮತ್ ಕೂಡಾ ಆಕಾಂಕ್ಷಿಯಾಗಿದ್ದರು. ಈ ಮಧ್ಯೆ ನಿವೃತ್ತ ಎಸ್ಸೈ ಮದನ್ ನಾಯಕ್ ಮತ್ತು ಬಿಜೆಪಿಯ ಉಚ್ಛಾಟಿತ ನಾಯಕ ಶ್ರೀಕರ ಪ್ರಭು ಕೂಡ ಪಕ್ಷೇತರರಾಗಿ ಸ್ಪರ್ಧಿಸುವುದು ಕೂಡ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಲಿದೆ.
ಮೂಡುಬಿದಿರೆಯಲ್ಲಿ ಟಿಕೆಟ್ ತಪ್ಪಿದ್ದರಿಂದ ಕುಪಿತಗೊಂಡಿದ್ದ ಜಗದೀಶ್ ಅಧಿಕಾರಿ ತನ್ನ ಅಧೀನದಲ್ಲಿದ್ದ ಬಿಜೆಪಿ ಕಚೇರಿಗೆ ಬೀಗ ಜಡಿದು ಬಹಿರಂಗ ಅಸಮಾಧಾನ ತೋಡಿಕೊಂಡರೂ ಕೂಡ ಬಿಜೆಪಿಯ ಜಿಲ್ಲಾ ನಾಯಕರ ಮಧ್ಯಸ್ಥಿಕೆಯಿಂದ ಅವರೀಗ ಮೌನಕ್ಕೆ ಶರಣಾಗಿದ್ದಾರೆ.
ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯದ ಸಂಜೀವ ಮಠಂದೂರು ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ. ಅಲ್ಲಿ ಬಂಟ ಸಮುದಾಯದ ಅಶೋಕ್ ರೈ ಮತ್ತು ಬ್ರಾಹ್ಮಣ ಸಮುದಾಯದ ಅರುಣ್ ಕುಮಾರ್ ಪುತ್ತಿಲ ಮತ್ತವರ ಬೆಂಬಲಿಗರು ಒಳಗಿಂದೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಳಿನ್ ಕಾರಣ
ನನಗೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟಿಕೆಟ್ ಕೊಡುವ ಭರವಸೆ ನೀಡಿದ್ದರು. 2 ದಿನಗಳ ಹಿಂದೆ ಪಕ್ಷದ ಕಚೇರಿಯಿಂದಲೇ ನನ್ನ ಗುರುತಿನ ಚೀಟಿಯನ್ನು ಕೇಳಿದ್ದರು. ಟಿಕೆಟ್ ಸಿಗವ ಭರವಸೆಯ ಹಿನ್ನೆಲೆಯಲ್ಲಿ ಎ. 23ರಂದು ತಾನು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೆ. ಇದೀಗ ನನಗೆ ಟಿಕೆಟ್ ತಪ್ಪಿದೆ. ಇದರ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕೈವಾಡವಿದೆ. ಅವರೇ ನನಗೆ ಟಿಕೆಟ್ ತಪ್ಪಿಸಿ ಮೋಸ ಮಾಡಿದ್ದಾರೆ. ಸಂಸದರ ಗೆಲುವಿಗಾಗಿ ನಾನು ಶಕ್ತಿಮೀರಿ ಶ್ರಮಿಸಿದ್ದೇನೆ. ಅವರ ಚುನಾವಣೆ ಸಂದರ್ಭ ನಾನು ಸಾಕಷ್ಟು ಹಣವನ್ನೂ ವ್ಯಯಿಸಿದ್ದೇನೆ. ಇದೀಗ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ರೀತಿಯಲ್ಲಿ ನನ್ನನ್ನು ಕೈ ಬಿಟ್ಟಿದ್ದಾರೆ ಎಂದು ಕೃಷ್ಣ ಪಾಲೆಮಾರ್ ಆರೋಪಿಸಿದ್ದಾರೆ.
ನನಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರವಿದೆ. ಕಳೆದ ಹಲವು ವರ್ಷದಿಂದ ನಾನು ಪಕ್ಷಕ್ಕಾಗಿ ದುಡಿದಿರುವೆ. ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಲು ಒತ್ತಡ ಹಾಕಿದ್ದಾರೆ. ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನೆರೆಡು ದಿನದಲ್ಲಿ ಸೂಕ್ತ ನಿರ್ಧಾರ ತಾಳುವೆ ಎಂದು ಬಿಜೆಪಿಯ ಟಿಕೆಟ್ ವಂಚಿತ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಬಿಲ್ಲವರ ಅಸಮಾಧಾನ
ಬಿಲ್ಲವ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ಬೆಳ್ತಂಗಡಿ ಕ್ಷೇತ್ರದಲ್ಲಿ ಮತ್ತು ಬಿಜೆಪಿ ಪಕ್ಷವು ಮೂಡುಬಿದಿರೆಯಲ್ಲಿ ಮಾತ್ರ ಟಿಕೆಟ್ ನೀಡಿರುವ ಬಗ್ಗೆ ಎರಡೂ ಪಕ್ಷಗಳಲ್ಲಿ ಸಕ್ರಿಯರಾಗಿರುವ ಬಿಲ್ಲವರು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮನ್ನು ದುಡಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ನಾಯಕನಾಗಿ ರೂಪುಗೊಳ್ಳುವ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.