ಕಾಪು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯೇ ಮುಂದಿನ ಗುರಿ: ಸೊರಕೆ
ಕಾಪು, ಎ.28: ಕಾಪು ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಆಗಬೇಕು. ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯ ಮಾಡಬೇಕಾಗಿದೆ ಎಂದು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಶಿರ್ವ ಪೇಟೆಯಲ್ಲಿ ಶನಿವಾರ ನಡೆದ ಕಾಪು ಕ್ಷೇತ್ರ ದಕ್ಷಿಣ ವಲಯ ಕಾರ್ಯ ಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿನಯ ವಂತ ರಾಜಕಾರಣಿ ಎಂದು ಖ್ಯಾತರಾದ ವಿನಯ್ ಕುಮಾರ್ ಸೊರಕೆಯವರು ಕಾಪು ಕ್ಷೇತ್ರಕ್ಕಾಗಿ ಜನಸೇವಕನಾಗಿ ಬಹಳಷ್ಟು ಬೆವರು ಸುರಿಸಿ ದುಡಿದಿದ್ದಾರೆ. ಆದುದರಿಂದ ಇದಕ್ಕೆ ಪ್ರತಿಫಲವಾಗಿ ಮತದಾರರಾದ ನೀವು ಅವರನ್ನು ಅತ್ಯಧಿಕ ಬಹುಮತದ ಅಂತರದಿಂದ ಗೆಲ್ಲಿಸಬೇಕು ಎಂದರು.
ಬಿಜೆಪಿ ಮುಖಂಡೆ ಶಾರದಾ ಪೂಜಾರಿ, ಕುತ್ಯಾರು ಬಿಜೆಪಿ ಯುವ ನಾಯಕ ರೋಹಿತ್ ಆಚಾರ್ಯ, ನಿತಿನ್ ಆಚಾರ್ಯ, ಸಂತೋಷ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಅಮೃತ್ ಶೆಣೈ, ದೇವಿಪ್ರಸಾದ್ ಶೆೆಟ್ಟಿ, ನವೀನ್ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ, ದಿನೇಶ್ ಕೋಟ್ಯಾನ್, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಗೀತಾ ವಾಗ್ಳೆ, ಪ್ರಭಾವತಿ, ಸುಧೀರ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ವಿಲ್ಸನ್ ರೋಡಿಗ್ರಸ್, ವಿಶ್ವಾಸ್ ಅಮೀನ್, ಅಬ್ದುಲ್ ಅಝೀಝ್, ಕ್ರಿಷ್ಟನ್ ಅಲ್ಮೇಡಾ ಉಪಸ್ಥಿತರಿದ್ದರು.