ಉಳ್ಳಾಲ, ಸೋಮೇಶ್ವರ, ಉಚ್ಚಿಲದಲ್ಲಿ ತೀವ್ರಗೊಂಡ ಕಡಲಿನಬ್ಬರ
ಉಳ್ಳಾಲ, ಎ. 22: ಹವಾಮಾನ ವೈಪರಿತ್ಯದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪದೇಶಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಬೃಹತಾಕರಾದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ.
ಕಡಲ್ಕೊರೆತ ತೀವ್ರಗೊಂಡ ಪರಿಣಾಮ ಉಚ್ಚಿಲ ಪ್ರದೇಶದ ಕೆಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಕಡಲ್ಕೊರೆತದ ತೀವ್ರತೆ ವೀಪರೀತವಾಗಿದ್ದು, ಕಡಲ ತಡಿಯ ಜನರು ಭಯಭೀತರಾಗಿದ್ದಾರೆ.
ಸೋಮೇಶ್ವರ, ಉಚ್ಚಿಲದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ರವಿವಾರ ಮಧ್ಯಾಹ್ನವೇ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಮಳೆಗಾಲ ಆರಂಭದ ಬಳಿಕವಷ್ಟೇ ಕಡಲ್ಕೊರೆತದ ಸಮಸ್ಯೆ ಎದುರಾಗುತ್ತಿತ್ತು, ಆದರೆ ಈ ಭಾರಿ ಅದಕ್ಕಿಂತ ಮುನ್ನವೇ ಕಡಲಿನಬ್ಬರ ಹೆಚ್ಚಾಗಿರುವುದು ಕಡಲ ತೀರದ ಜನರನ್ನು ಆತಂಕಕ್ಕೀಡುಮಾಡಿದೆ.
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ಕಡಲ್ಕೊರೆತದಿಂದಾಗಿ ಜನವಸತಿ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಈ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಪರಿಹಾರ ಕಾರ್ಯಾಚರಣೆ ನಡೆಯಿತು.