ಮೋಸ ಮಾಡಿದ ಬಿಜೆಪಿಯನ್ನು ನಾಮಧಾರಿ ಸಮಾಜ ಬೆಂಬಲಿಸದು-ಆರ್.ಎನ್.ನಾಯ್ಕ
ಭಟ್ಕಳ, ಎ. 23: ತಾಲೂಕಿನಲ್ಲಿ ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಲವಾರು ಊಹಾ ಪೋಹಗಳೂ ಕೇಳಿ ಬಂದಿದ್ದು ಎಲ್ಲವಕ್ಕೂ ಕೂಡಾ ಮಾಜಿ ಸಚಿವ ಆರ್. ಎನ್. ನಾಯ್ಕ ಅವರು ತೆರೆ ಎಳೆದಿದ್ದಾರೆ.
ಇತ್ತೀಚಿನ ವರೆಗೂ ಕೂಡಾ ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡು ಕೆಲಸವನ್ನು ಮಾಡುತ್ತಿದ್ದ ಆರ್. ಎನ್. ನಾಯ್ಕ ಅವರು ಇತ್ತೀಚೆಗೆ ಶಾಸಕ ಮಂಕಾಳ ವೈದ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಪುನ ಸೇರ್ಪಡೆಗೊಂಡಿದ್ದು ಭಟ್ಕಳದಲ್ಲಿ ಅವರು ನಾಮಧಾರಿ ಸಮಾಜದ ಪ್ರಮುಖ ರೊಂದಿಗೆ ಕಾಂಗ್ರೆಸ್ ಪಕ್ಷದ ಸಭೆ ನಡೆಸಿದರು.
ಈ ಸಭೆಯಲ್ಲಿ ಬಿಜೆಪಿ ನಾಮಧಾರಿಗಳಿಗೆ ಒಗ್ಗಟ್ಟಾಗುವಂತೆ ಕರೆ ನೀಡಿದ ಕುರಿತು ಚರ್ಚಿಸಿದ ಅವರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯುವ ಪ್ರಶ್ನೆಯೇ ಬರದು ಎಂದರಲ್ಲದೇ ಬಿ.ಜೆ.ಪಿ.ಯಿಂದ ನಾಮಧಾರಿ ಸಮಾಜದ ಅನೇಕ ಆಕಾಂಕ್ಷಿಗಳಿಗೆ ಅನ್ಯಾಯವಾಗಿದ್ದು ನಮ್ಮ ಪಕ್ಷದಲ್ಲಿ ಸಮಾಜಿ ನ್ಯಾಯ ಕಾಪಾಡಿಕೊಂಡು ಬರಲಾಗಿದೆ ಎಂದರು.
ಬಿ.ಜೆ.ಪಿ.ಯಲ್ಲಿ ಕೊನೆಯ ಕ್ಷಣದ ತನಕವೂ ಕೂಡಾ ಟಿಕೆಟ್ ನೀಡುವುದಾಗಿ ಭರವಸೆಯನ್ನು ನೀಡಿ ಟಿಕೆಟ್ ತಪ್ಪಿಸುವಲ್ಲಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರ ಕೈವಾಡವಿದ್ದು ಎಲ್ಲಾ ಕಾರ್ಯಕರ್ತರು ಕೂಡಾ ತಿರುಗಿ ಬಿದ್ದಿದ್ದಾರೆ. ಈ ಹಿಂದಿನಿಂದಲೂ ನಮ್ಮ ಸಮಾಜ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದು ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಜನಪ್ರಿಯತೆಯನ್ನು ಗಳಿಸಿಕೊಂಡು ಎಲ್ಲರೊಂದಿಗೆ ಬೆರೆತು ಬಡವರ ಕಷ್ಟಗಳನ್ನು ಆಲಿಸುವ ಮಂಕಾಳ ವೈದ್ಯ ಅವರನ್ನೇ ಬೆಂಬಲಿಸೇಕು ಎಂದರು.