ಕಥುವಾ ಪ್ರಕರಣ: ಮಾನವ ಸಮಾನತಾ ಮಂಚ್ನಿಂದ ಪ್ರತಿಭಟನೆ
ಮಂಗಳೂರು, ಎ.27: ಜಮ್ಮುವಿನ ಕಥುವಾದದಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಾನವ ಸಮಾನತಾ ಮಂಚ್ನಿಂದ ಶುಕ್ರವಾರ ನಗರದ ಕಂಕನಾಡಿ ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿತು.
ಸಮಾನತಾ ಮಂಚ್ನ ಅಧ್ಯಕ್ಷ ಅಲಿ ಹಸನ್ ಮಾತನಾಡಿ, ಕಾನೂನಿನ ಬಗ್ಗೆ ಜನರಿಗೆ ಗೌರವ ಮತ್ತು ಭಯ ಇಲ್ಲದಿರುವುದೇ ಇಂತಹ ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ. ದೇಶಾದ್ಯಂತ ಬಾಲಕಿಯರ ಅತ್ಯಾಚಾರ ಪ್ರಕರಣ ಹೆಚ್ಚುತ್ತಿರುವ ಈ ಸಂದರ್ಭ ಕೇಂದ್ರ ಸರಕಾರ ಕಾನೂನಿಗೆ ತಿದ್ದುಪಡಿ ತಂದಿರುವುದು ಸ್ವಾಗತಾರ್ಹ. ಆದರೆ, 12 ವರ್ಷದೊಳಗಿನ ಬಾಲಕಿಯರ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಮಾತ್ರ ಶಿಕ್ಷೆ ವಿಧಿಸುವ ಕ್ರಮ ಸಮರ್ಥನೀಯವಲ್ಲ. ಸಂತ್ರಸ್ತರನ್ನು ಸಮಾನ ರೀತಿಯಲ್ಲಿ ಕಾಣಬೇಕಾದರೆ 18 ವರ್ಷದೊಳಗಿನವರ ಮೇಲೆ ನಡೆಯುವ ದೌರ್ಜನ್ಯ,ಅತ್ಯಾಚಾರ, ಕೊಲೆ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೋ ಮಾತನಾಡಿದರು. ಗೌರವಾಧ್ಯಕ್ಷ ವಸಂತ ಟೈಲರ್, ಪದಾಧಿಕಾರಿಗಳಾದ ಮುಹಮ್ಮದ್ ಸಾಲಿ, ಸತ್ತಾರ್, ಪುರುಷೋತ್ತಮ ಮತ್ತಿತರರಿದ್ದರು.