ಕಾಮರ್ಸ್ ನಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಪುರಾಣಿಕ್ಗೆ ಸಿಎ ಆಗುವ ಕನಸು
ಪಿಯು ಫಲಿತಾಂಶ
ಉಡುಪಿ, ಎ. 30: ಎರಡು ವರ್ಷಗಳ ಹಿಂದೆ ರಾಜ್ಯದ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಾಗ ನಾಲ್ಕನೇ ರ್ಯಾಂಕ್ ಪಡೆದಿದ್ದ ಬಸ್ರೂರಿನಂಥ ಗ್ರಾಮೀಣ ಪ್ರದೇಶದ ಬಿ. ವೆಂಕಟೇಶ್ ಪುರಾಣಿಕ್ ಇಂದು ಪಿಯುಸಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ತನ್ನ ಸಾಧನೆ ಅಕಸ್ಮಿಕವಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಬಸ್ರೂರಿನಲ್ಲಿ ಪುರೋಹಿತ ವೃತ್ತಿಯ ಸುಬ್ರಹ್ಮಣ್ಯ ಪುರಾಣಿಕರ ಪುತ್ರನಾದ ವೆಂಕಟೇಶ್ ಪುರಾಣಿಕ್, ಗರಿಷ್ಠ 600ರಲ್ಲಿ 594 ಅಂಕ ಪಡೆದಿದ್ದಾರೆ. ಲೆಕ್ಕ ಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಸಂಸ್ಕೃತದಲ್ಲಿ ತಲಾ 100 ಅಂಕಗಳಿಸಿರುವ ಅವರು ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದಲ್ಲಿ ತಲಾ 99 ಅಂಕ ಪಡೆದಿದ್ದಾರೆ. ಇಂಗ್ಲಿಷ್ನಲ್ಲಿ 96 ಅಂಕ ಗಳಿಸಿದ್ದಾರೆ.
ರಾಜ್ಯಕ್ಕೆ ದ್ವಿತೀಯ ರ್ಯಾಂಕ್ನ್ನು ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಆದರೆ 590ಕ್ಕಿಂತ ಅಧಿಕ ಅಂಕಗಳಿಸುವ ವಿಶ್ವಾಸವಿತ್ತು ಎಂದರು. ದೇವರ ಆರ್ಶೀವಾದ, ಗುರು-ಹಿರಿಯರ ಶುಭ ಹಾರೈಕೆ ಹಾಗೂ ನನ್ನ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದ ಅವರು ಮುಂದೆ ಸಿಎ ಮಾಡುವ ಇಂಗಿತ ವ್ಯಕ್ತಪಡಿಸಿದರು. ಸಿಎ ಕಲಿಕೆಯೊಂದಿಗೆ ಬಿ.ಕಾಂನ್ನು ಓದುವ ಗುರಿಯನ್ನು ಹೊಂದಿದ್ದೇನೆ ಎಂದು ಅವರು ಹೇಳಿಕೊಂಡರು.