ಭಾಷಾ ಶುದ್ಧತೆಯಲ್ಲಿ ಯಕ್ಷಗಾನ ಕೊಡುಗೆ ಅಪಾರ: ಪ್ರೊ. ಜಿ. ಆರ್. ರೈ
ಮಂಗಳೂರು, ಮೇ 16: ಕನ್ನಡ ಭಾಷೆಯ ಶುದ್ಧತೆ ಹಾಗೂ ಪೌರಾಣಿಕ ಜ್ಞಾನ ಪ್ರಸರಣೆಯಲ್ಲಿ ಯಕ್ಷಗಾನ ಕ್ಷೇತ್ರದ ಕೊಡುಗೆ ಮಹತ್ತರವಾದದ್ದು ಎಂದು ಸಾಹಿತಿ ಪ್ರೊ. ಜಿ. ಆರ್. ರೈ ನುಡಿದರು. ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಂಗ್ಲ ಭಾಷೆಯ ಪ್ರಭಾವ ಕನ್ನಡದ ಮೇಲೆ ಅತಿಯಾಗಿ ಆಗುತ್ತಿರುವ ಈ ದಿನಗಳಲ್ಲಿ ಯಕ್ಷಗಾನ ಕಲಾವಿದರು ಇದನ್ನು ಹಿಮ್ಮೆಟ್ಟಿಸಿ ಶುದ್ಧವಾದ ಕನ್ನಡ ಮಾತುಗಾರಿಕೆಯಲ್ಲಿ ತೊಡಗುವುದು ನಿಜಕ್ಕೂ ಶ್ಲಾಘನೀಯ. ಆ ಮೂಲಕ ಕನ್ನಡದ ಸಂಸ್ಕೃತಿಯ ಬೆಳವಣಿಗೆಯೊಂದಿಗೆ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಯಕ್ಷಗಾನ ಕಲೆ ಸಫಲವಾಗಿದೆ ಎಂದು ಪ್ರೊ. ಜಿ.ಆರ್. ರೈ ಹೇಳಿದರು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆರ್.ಕೆ. ಉಪ್ಪೂರು, ರಮಾನಾಥ ಹೆಗ್ಡೆ, ಪೊಳಲಿ ನಿತ್ಯಾನಂದ ಕಾರಂತ, ತಾರಾನಾಥ ಶೆಟ್ಟಿ ಬೋಳಾರ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಕಸಾಪ ಮಂಗಳೂರು ಘಟಕಾಧ್ಯಕ್ಷೆ ಜಯಲಕ್ಷ್ಮಿ ಬಿ. ಶೆಟ್ಟಿ, ಜಿಲ್ಲಾ ಕಸಾಪ ಗೌರವ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ ಉಪಸ್ಥಿತರಿದ್ದರು.