ಮೇ 21-30: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರ
ಮಂಗಳೂರು, ಮೇ 18: ಪ್ರಸಕ್ತ (2017-18ನೇ) ಶೈಕ್ಷಣಿಕ ಸಾಲಿನ 10 ದಿನಗಳ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರವು ಮಂಗಳೂರಿನ ಸ್ವಾಯತ್ತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೇ 21ರಿಂದ ಮೇ 30ರವರೆಗೆ ನಡೆಯಲಿದೆ.
ಹಲವು ವರ್ಷಗಳ ಬಳಿಕ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಈ ಶಿಬಿರಕ್ಕೆ ಅವಕಾಶ ದೊರಕಿದ್ದು, ಎನ್.ಸಿ.ಸಿ. ಗ್ರೂಪ್ ಮುಖ್ಯ ಕಚೇರಿ, ಮಂಗಳೂರು ಹಾಗೂ ಎನ್.ಸಿ.ಸಿ. 18 ಕರ್ನಾಟಕ ಬೆಟಾಲಿಯನ್ ಸಹಯೋಗದೊಡನೆ ತರಬೇತಿ ಶಿಬಿರ ಆಯೋಜಿಸಲಾಗಿದೆ.
ತರಬೇತಿ ಶಿಬಿರ ಬೆಟಾಲಿಯನ್ ನಡೆಸುವ ಅತಿ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ. ಎನ್ಸಿಸಿ ಪಠ್ಯ ಹಾಗೂ ಪಠ್ಯೇತರ ಅನೇಕ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಎಲ್ಲಾ ಚಟುವಟಿಕೆಗೆಳು 18ನೇ ಕರ್ನಾಟಕ ಬೆಟಾಲಿಯನ್ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.
18ನೇ ಕರ್ನಾಟಕ ಬೆಟಾಲಿಯನ್ ಕಮ್ಯಾಂಡಿಂಗ್ ಅಧಿಕಾರಿಯಾಗಿರುವ ಕರ್ನಲ್ ರೆಜಿ ಫಿಲಿಫೋಸ್ ಶಿಬಿರದ ನೇತೃತ್ವ ವಹಿಸುತ್ತಾರೆ. ಅವರಿಗೆ ಸಹಾಯಕರಾಗಿ 18ನೇ ಕರ್ನಾಟಕ ಬೆಟಾಲಿಯನ್ ಆಡಳಿತಾಧಿಕಾರಿ ಲೆ.ಕ.ಗ್ರೇಸಿಯನ್ ಸಿಕ್ವೇರ ಕಾರ್ಯ ನಿರ್ವಹಿಸುತ್ತಾರೆ. ವಿವಿಧ ಕಾಲೇಜುಗಳ ಎನ್ಸಿಸಿ ಅಧಿಕಾರಿಗಳು, 19 ಎನ್ಸಿಸಿ ಅಧಿಕಾರಿಗಳು ಹಾಗೂ ಇತರ ಸಹಾಯಕ ಸಿಬ್ಬಂದಿ ಶಿಬಿರದಲ್ಲಿ ಭಾಗಿಯಾಗಿ ಸೇವೆ ಸಲ್ಲಿಸುತ್ತಾರೆ.
400 ವಿದ್ಯಾರ್ಥಿ ಹಾಗೂ 200 ವಿದ್ಯಾರ್ಥಿನಿ ಎನ್ಸಿಸಿ ಕೆಡೆಟ್ಗಳು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಶಿಬಿರದಲ್ಲಿ ಭಾಗವಹಿಸುತ್ತಾರೆ.
ಶಿಬಿರವನ್ನು ಗ್ರೂಪ್ ಕಮ್ಯಾಂಡರ್ ಕರ್ನಲ್ ಅನಿಲ್ ನೌಟಿಯಾಲ್ ಉದ್ಘಾಟಿಸಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ.ಪ್ರವೀಣ್ ಮಾರ್ಟಿಸ್ ಭಾಗಿಯಾಗುತ್ತಾರೆ. ಎನ್.ಸಿ.ಸಿ.ಯ ಎಲ್ಲಾ ಮೂರು ವಿಭಾಗಳು- ಸೇನಾ ವಿಭಾಗ, ನೌಕಾ ವಿಭಾಗ ಹಾಗೂ ವಾಯು ವಿಭಾಗಳು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ.