ಒಕ್ಕೆತ್ತೂರು: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
ಮುಹಮ್ಮದ್ ಅಫ್ರಿದ್
ಬಂಟ್ವಾಳ, ಮೇ 20: ಬೈಕ್ ಸವಾರನೋರ್ವ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ-ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ರವಿವಾರ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಕುಂಞಿಮೋನು ಎಂಬವರ ಪುತ್ರ ಮುಹಮ್ಮದ್ ಅಫ್ರಿದ್ (18) ಮೃತ ಯುವಕ ಎಂದು ಗುರುತಿಸಲಾಗಿದೆ. ಅಫ್ರಿದ್ ವಿಟ್ಲದ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಮನೆಯಿಂದ ತನ್ನ ಸ್ನೇಹಿತ ಮುಹಮ್ಮದ್ ಇಸಾಕ್ ಎಂಬವರ ಬೈಕಿನಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಒಕ್ಕೆತ್ತೂರು ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮ ಅಫ್ರಿದ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ಸಂದರ್ಭ ವಿಟ್ಲ ಕಡೆಯಿಂದ ಬಂದ ಖಾಸಗಿ ಬಸ್ ಅಫ್ರಿದ್ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅಫ್ರಿದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲಕ ಯಾವುದೇ ಗಾಯವಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.