ಉದ್ಯಾವರ: ಟೆಂಪೊಗೆ ಬಸ್ಸು ಢಿಕ್ಕಿ; 15 ಮಂದಿಗೆ ಗಾಯ
ಉದ್ಯಾವರ, ಮೇ 23: ಇಲ್ಲಿನ ಹಲಿಮಾ ಸಾಬ್ಜು ಅಡಿಟೋರಿಯಂ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮುಂಜಾನೆ ಖಾಸಗಿ ಬಸ್ಸೊಂದು, ನಿಂತಿದ್ದ ಟೆಂಪೊ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒಟ್ಟು 15 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಉಡುಪಿಯಿಂದ ಮಂಗಳೂರಿನತ್ತ ದಾವಿಸುತಿದ್ದ ಬಸ್ಸು, ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ಬಸ್ಸಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಟೆಂಪೊಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಟೆಂಪೊ ಹೋಲೋ ಬ್ಲಾಕ್ ತುಂಬಿಕೊಂಡು ಕಟಪಾಡಿಯಿಂದ ಉಡುಪಿಯತ್ತ ಹೋಗುತಿದ್ದು, ಲೋಡರ್ ಒಬ್ಬನನ್ನು ಹತ್ತಿಸಿಕೊಳ್ಳಲು ಪಶ್ಚಿಮ ಬದಿಯ ಮಣ್ಣಿನ ರಸ್ತೆಯಲ್ಲಿ ನಿಂತಿತ್ತು ಎನ್ನಲಾಗಿದೆ.
ಇದರಿಂದ ಟೆಂಪೋ ಮಗುಚಿ ಬಿದ್ದಿದ್ದು, ಟೆಂಪೋದ ಎದುರು ಸೀಟಿನಲ್ಲಿ ಕುಳಿತಿದ್ದ ಸಂತೋಷ್ ಮತ್ತು ಪ್ರಕಾಶ್ ಎಂಬವರಿಗೆ ಹಾಗೂ ಬಸ್ಸಿನ ನಿರ್ವಾಹಕ ಮತ್ತು ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಈ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story