ಸಾಮಾಜಿಕ ಜಾಲತಾಣದಲ್ಲಿ ಸಾಮರಸ್ಯ ಕದಡಲು ಯತ್ನ: ಓರ್ವನ ಬಂಧನ
ಮಂಗಳೂರು, ಮೇ 23: ಧರ್ಮಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ ಬರಹವನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಶಾಂತಿ ಕದಡಲು ಯತ್ನಿಸಿದ್ದ ಆರೋಪದಲ್ಲಿ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಗು ಜಿಲ್ಲೆ ಮಡಿಕೇರಿಯ ಕೊಯಿನಾಡು ಗ್ರಾಮದ ಮಿಥುನ್ ಕೆ.ಬಿ. (28) ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆಯ ಹಿನ್ನೆಲೆ: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗೋಲಿತ್ತಡಿ ಎಂಬಲ್ಲಿ ಮೇ 20ರಂದು ಕಾಸರಗೋಡು ಮೂಲದ ರಾಜೇಂದ್ರ ಎ.ಬಿ. ಎಂಬವರು ಚಲಾಯಿಸುತ್ತಿದ್ದ ಬಸ್ಸಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ರಸ್ತೆಗೆ ಬಿದ್ದು ಗಾಯವಾಗಿತ್ತು. ಬಸ್ಸಿನ ನಿರ್ವಾಹಕ ನಾಗರಾಜ ಕೆ. (27) ಎಂಬವರು ಸವಾರರನ್ನು ಆಸ್ಪತ್ರೆಗೆ ದಾಖಲಿಸಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭ ಗಾಳಿಮುಖದ ಮುನಾಫ್, ನಿಝಾದ್ ಹಾಗೂ ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆಂದು, ಆರೋಪಿಗಳ ಪೈಕಿ ಮುನಾಫ್ ಜೀವ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಆರೋಪಿಗಳಾದ ಕಾಸರಗೋಡು ನಿವಾಸಿಗಳಾದ ಮುನಾಫ್, ನಿಝಾದ್, ನೆಟ್ಟಣಿಗೆ ಮುಡ್ನೂರಿನ ಶಾಹುಲ್ ಹಮೀದ್ ಎಂಬವರನ್ನು ಮೇ 22ರಂದು ಪೊಲೀಸಲು ಗಾಳಿಮುಖದಲ್ಲಿ ದಸ್ತಗಿರಿ ಮಾಡಿದ್ದರು. ಇದೇ ಘಟನೆಗೆ ಸಂಬಂಧಿಸಿ ಮೇ 21ರಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಪರಿಸರ ಜನರ ಮೊಬೈಲ್ನ ವಾಟ್ಸ್ಆ್ಯಪ್ನಲ್ಲಿ ‘ಬ್ರೇಕಿಂಗ್ ನ್ಯೂಸ್ ಗಾಳಿಮುಖ ಪರಿಸರದಲ್ಲಿ ಮತಾಂಧರ ಅಟ್ಟಹಾಸ’ ಎಂಬ ಶೀರ್ಷಿಕೆಯಡಿ ‘‘ಪುತ್ತೂರು ತಾಲೂಕು ಗಾಳಿಮುಖ ಗೋಳಿತ್ತಡಿ ಪರಿಸರದ ಕೆಲವು ಮತಾಂಧರಿಂದ ಹಿಂ.ಜಾ.ವೇ. ಈಶ್ವರ ಮಂಗಲ ಕಾರ್ಯಕರ್ತ ನಾಗರಾಜ್ ಕಲ್ಲಾಜೆ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು’’ ಎಂಬುದಾಗಿ ಸಂದೇಶ ಹರಿದಾಡುತ್ತಿದ್ದವು. ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇ 22ರಂದು ಮಿಥುನ್ ಕೆ.ಬಿ. ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ದ್ವಿಚಕ್ರ ವಾಹನ ಸವಾರ ಢಿಕ್ಕಿ ಹೊಡೆದು ಗಾಯಗೊಂಡು ರಸ್ತೆ ಬಿದ್ದಿದ್ದು, ಬಸ್ಸು ನಿರ್ವಾಹಕ ಮತ್ತು ಚಾಲಕ ಶೀಘ್ರವಾಗಿ ಆಸ್ಪತ್ರೆಗೆ ರವಾನಿಸದಿರುವುದನ್ನು ಗಮನಿಸಿದ ಸ್ಥಳೀಯರು ಕೋಪಗೊಂಡು ಬಸ್ಸಿನ ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆಯೇ ಹೊರತು ಯಾವುದೇ ಕೋಮು ದ್ವೇಷದಿಂದ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.