ಕುಕ್ಕೆ ಸುಬ್ರಹ್ಮಣ್ಯ: ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ
ಸುಬ್ರಹ್ಮಣ್ಯ, ಜೂ. 21: ಕುಕ್ಕೆ ಸುಬ್ರಹ್ಮಣ್ಯಕ್ಕೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕುಟುಂಬ ಸಮೇತರಾಗಿ ಗುರುವಾರ ಭೇಟಿ ನೀಡಿದರು.
ಅವರೊಂದಿಗೆ ತಂದೆ ಕೆ.ಎನ್. ಲೋಕೇಶ್, ತಾಯಿ ಉಪನ್ಯಾಸಕಿ ರಾಜೇಶ್ವರಿ ಲೋಕೇಶ್ ಕ್ಷೇತ್ರಕ್ಕೆ ಆಗಮಿಸಿದ್ದರು. ಬಳಿಕ ರಾಹುಲ್ ಅವರು ಶ್ರೀ ದೇವಳದ ಆಡಳಿ ಕಚೇರಿಗೆ ಭೇಟಿ ನೀಡಿದರು.ಇಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪ್ರಸಾದದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಕೆ.ಎಂ.ಗೋಪಿನಾಥನ್ ನಂಬೀಶ, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಹರೀಶ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸ್ಥಳಿಯರಾದ ಶಿವಕುಮಾರ್ ಕಾಮತ್ ಮತ್ತು ಲೋಕೇಶ್ ಎನ್.ಎಸ್ ಉಪಸ್ಥಿತರಿದ್ದರು.
ದೇವರಲ್ಲಿ ಒಳಿತಿಗಾಗಿ ಪ್ರಾರ್ಥನೆ: ಕೆ.ಎಲ್.ರಾಹುಲ್
ಈ ಸಂದರ್ಭ ಮಾತನಾಡಿದ ಅವರು, ನಾನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಭಕ್ತ. ಕಳೆದ ಹಲವಾರು ವರ್ಷಗಳಿಂದ ನಾನು ಶ್ರೀ ಕ್ಷೇತ್ರಕ್ಕೆ ಬರುತ್ತಿದ್ದೇನೆ. ನನ್ನ ಒಳಿತಿಗೆ ಶ್ರೀ ದೇವರ ಆಶೀರ್ವಾದ ಕಾರಣವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಐಪಿಎಲ್ ಆರಂಭದ ಮೊದಲು ಕ್ಷೇತ್ರಕ್ಕೆ ಆಗಮಿಸಿದ್ದೆ ಮುಂಬರುವ ಇಂಗ್ಲೆಂಡ್ ಸರಣಿಗಾಗಿ ಅಲ್ಲಿಗೆ ನಾಳೆ ತೆರಳುತ್ತಿದ್ದು, ಅದಕ್ಕೆ ಮುಂಚಿತವಾಗಿ ತಂದೆ ತಾಯಿಯೊಂದಿಗೆ ಕ್ಷೇತ್ರಕ್ಕೆ ಬಂದು ದೇವರ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥಿಸಿದ್ದೇನೆ ಎಂದರು.