ಮಂಜೇಶ್ವರ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
ಮಂಜೇಶ್ವರ, ಜೂ. 22: ಉದ್ಯಾವರ ಹತ್ತನೇ ಮೈಲು ಬಳಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು ಈ ವೇಳೆ ಅದೇ ರಸ್ತೆಯಾಗಿ ಬಂದ ಲಾರಿ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ.
ಮೃತ ಯುವಕನನ್ನು ಮಾಡ ನಿವಾಸಿ ಆರಿಫ್ ಎಂಬವರ ಪುತ್ರ ನಿಯಾಝ್ (20) ಎಂದು ಗುರುತಿಸಲಾಗಿದೆ.
ಬೈಕ್ ಢಿಕ್ಕಿಯಿಂದ ಗಾಯಗೊಂಡಿರುವ ಹೊಸಬೆಟ್ಟು ವಿಲೇಜ್ ಆಫೀಸ್ ನಲ್ಲಿ ನೌಕರ ಅಬ್ದುಲ್ಲಾ (60) ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಅಪಘಾತ ತಿಳಿದು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ಸಂಚಾರ ಸುಗಮ ಗೊಳಿಸಿದರು. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story