ಪುಂಜಾಲಕಟ್ಟೆ: ನೇಣು ಬಿಗಿದು ನಾಟಕ ಕಲಾವಿದ ಆತ್ಮಹತ್ಯೆ
ಬಂಟ್ವಾಳ, ಜೂ. 23: ನಾಟಕ ಕಲಾವಿದನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪುಂಜಾಲಕಟ್ಟೆ ಸಮೀಪದ ನಾಕುನಾಡ್ ಎಂಬಲ್ಲಿ ನಡೆದಿದೆ.
ನಾಕುನಾಡಿನ ದಿ. ಭೋಜ ಪೂಜಾರಿ ಎಂಬವರ ಪುತ್ರ ಪ್ರಶಾಂತ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಪ್ರಶಾಂತ್, ವೇಣೂರು ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಶಾಂತ್ ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು, ತಕ್ಷಣ ತಾಯಿ ಗಮನಿಸಿ ಬೊಬ್ಬೆ ಹೊಡೆದಾಗ ನೆರೆ ಹೊರೆಯವರು ಆಗಮಿಸಿ ಕೆಳಕ್ಕೆ ಇಳಿಸಿದರಾದರೂ ಆದಾಗಲೇ ಪ್ರಶಾಂತ್ ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಶಾಂತ್ ಅವರು ನಾಟಕ ಕಲಾವಿದನಾಗಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾಕುನಾಡು ವಲಯ ಬಿಜೆಪಿ ಅಧ್ಯಕ್ಷರಾಗಿರುವ ಪ್ರಶಾಂತ್, ಸ್ವಸ್ತಿಕ್ಫ್ರೆಂಡ್ಸ್ ಕ್ಲಬ್ನ ಸಾಮೂಹಿಕ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗುರಿಕಾರನಾಗಿ ಕಾರ್ಯ ನಿರ್ವಹಿಸಿದ್ದರು.
ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಪೊಲೀಸರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದರು. ಶಾಸಕ ರಾಜೇಶ್ ನಾಕ್ಉಳಿಪ್ಪಾಡಿ ಅವರು ಮೃತರ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.