ಉಡುಪಿ: ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು, ತರಬೇತಿ ಕಾರ್ಯಕ್ರಮ
ಉಡುಪಿ, ಜು.11: ಕರ್ನಾಟಕ ರಾಜ್ಯ ಹಜ್ ಕಮಿಟಿ ಹಾಗೂ ಉಡುಪಿಯ ಖದೀಮುಲ್ ಹಜ್ಜಾಜ್ ಸಹಯೋಗದೊಂದಿಗೆ ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು ಲಸಿಕೆ ಹಾಕುವ ಹಾಗೂ ತರಬೇತಿ ಕಾರ್ಯಕ್ರಮವನ್ನು ಇಂದು ಮಣಿಪಾಲ ಜುಮಾ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಖದೀಮುಲ್ ಹಜ್ಜಾಜ್ನ ಅಧ್ಯಕ್ಷ ಯಹ್ಯಾ ನಕ್ವಾ ಮಾತನಾಡಿ, ಈ ಬಾರಿ ಉಡುಪಿ ಜಿಲ್ಲೆಯಿಂದ 67 ಮಂದಿ ಯಾತ್ರಾರ್ಥಿಗಳು ಜು. 21, 22 ಹಾಗೂ 23ರಂದು ಹಜ್ ಯಾತ್ರೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತೆರಳಲಿರುವರು. ಅಝೀಝ್ನವರು 6 ಕೆ.ಜಿ. ಅಕ್ಕಿ ಸಹಿತ ಇತರ ಸಾಮಾನು ಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ ಗ್ರೀನ್ನವರು ಯಾವುದೇ ಸಾಮಾನು ತೆಗೆದುಕೊಂಡು ಹೋಗುವಾಗೇ ಇಲ್ಲ ಎಂದರು.
ಜು.21ರಂದು ತೆರಳುವವರು 19ರಂದು, 22ರಂದು ತೆರಳುವವರು 20ರಂದು, 23ರಂದು ತೆರಳುವವರು 21ರಂದು ಬಜ್ಪೆಯ ಅನ್ಸಾರಿ ಸ್ಕೂಲ್ನಲ್ಲಿ ವರದಿ ಮಾಡಬೇಕು. ಯಾತ್ರೆಗೆ ಹೋಗುವವರೇ ಬಂದು ವರದಿ ಮಾಡಬೇಕಾಗಿಲ್ಲ. ಅವರ ಬದಲು ಯಾರು ಕೂಡ ಅಗತ್ಯ ದಾಖಲೆಯೊಂದಿಗೆ ಬಂದು ವರದಿ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.
ಮೌಲಾನ ಫರ್ವೆಝ್ ನಕ್ವ ಉಮ್ರಿ ಮದನಿ ಉರ್ದುವಿನಲ್ಲಿ, ನೇಜಾರು ಜುಮಾ ಮಸೀದಿಯ ಖತೀಬ್ ಉಸ್ಮಾನ್ ಮದನಿ ಕನ್ನಡದಲ್ಲಿ ಹಾಗೂ ಮಣಿ ಪಾಲ ಮಸೀದಿಯ ಇಮಾಮ್ ಸಾಧಿಕ್ ಖಾಸ್ಮಿ ಮಲಯಾಳಂನಲ್ಲಿ ಹಜ್ ಕುರಿತ ಪ್ರವಚನ ನೀಡಿದರು. ವೈದ್ಯ ಡಾ.ರಫೀಕ್ ತೋನ್ಸೆ ಆರೋಗ್ಯ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಜಮೀಯ್ಯತುಲ್ ಫಲಾಹ್ ಉಡುಪಿ ಅಧ್ಯಕ್ಷ ಅಬ್ದುಲ್ ಖತೀಬ್ ರಶೀದ್, ಸದ್ಬವನಾ ಮಂಚ್ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ, ಉಡುಪಿ ಜಮಾಅತೆ ಇಸ್ಲಾಮೀ ಹಿಂದ್ನ ಮುಹಮ್ಮದ್ ಮರಕಡ, ಸುನ್ನಿ ಸಂಯುಕ್ತ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಎಂ.ಎ.ಬಾವು, ಮಣಿಪಾಲ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು. ಖಾಸಿಂ ಬಾರಕೂರು ಸಹಕರಿಸಿದರು. ರೆಹಮತುಲ್ಲಾ ಹೂಡೆ ಕಾರ್ಯಕ್ರಮ ನಿರೂಪಿಸಿದರು.