ಇಂದಿರಾ ಕ್ಯಾಂಟೀನ್ ವಿರುದ್ಧದ ಆರೋಪ ರಾಜಕೀಯ ಪ್ರೇರಿತ: ಸಚಿವ ಖಾದರ್
ಮಂಗಳೂರು, ಜು.16: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ಆಗಿದೆ ಎನ್ನುವ ಆರೋಪ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 50 ಕೋಟಿ ರೂ. ಅವ್ಯವಹಾರವಾಗಿದೆ ಎಂದು ವಿಪಕ್ಷ ಶಾಸಕ ರಾಮದಾಸ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಇದೊಂದು ಆಧಾರರಹಿತ ಆರೋಪವಾಗಿದ್ದು, ಈ ಯೋಜನೆಗೆ ದೊರೆತಿರುವ ಜನಮನ್ನಣೆಯನ್ನು ಸಹಿಸದೆ ಜನರನ್ನು ದಿಕ್ಕು ತಪ್ಪಿಸುವ ಗೊಂದಲ ಉಂಟು ಮಾಡುವ ಯತ್ನವಾಗಿದೆ ಎಂದರು.
‘ಇಂದಿರಾ ಕ್ಯಾಂಟೀನ್’ ಒಟ್ಟು 211.24 ಕೋಟಿ ರೂ. ಮೊತ್ತದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಇದುವರೆಗೆ 113.78 ಕೋಟಿ ರೂ. ವೆಚ್ಚವಾಗಿದೆ. 136 ಕ್ಯಾಂಟೀನ್ಗಳ ಪೈಕಿ 72 ಈಗಾಗಲೇ ಕಾರ್ಯಾರಂಭಗೊಂಡಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವ ಖಾದರ್ ಮಾಹಿತಿ ನೀಡಿದರು.
Next Story