ಪೆರಿಯೊಟ್ಟು: ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ
ಅನಾರೋಗದಿಂದ ಬೇಸತ್ತು ಕೃತ್ಯ ಶಂಕೆ
ಉಪ್ಪಿನಂಗಡಿ, ಜು.16: ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪೆರಿಯೊಟ್ಟು ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬಾರ್ಯ ಗ್ರಾಮದ ಪೆರಿಯೊಟ್ಟು ನಿವಾಸಿ ಸಂಜೀವ ಪೂಜಾರಿ (60) ಹಾಗೂ ಅವರ ಪತ್ನಿ ಸೀತಾ (57) ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರು ಮನೆಯ ಕೊಠಡಿಯೊಳಗೆ ಬಾಗಿಲು ಹಾಕಿ ವಿಷ ಸೇವಿಸಿದ್ದು, ಸಂಜೀವ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಸೀತಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಸಂಜೀವ ಪೂಜಾರಿ ಕೆಲ ಸಮಯದಿಂದ ಅಸ್ತಮಾ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅವರಿಗೆ ಅನಾರೋಗ್ಯ ಕಾರಣ ಕೆಲ ಸಮಯದಿಂದ ಕೆಲಸಕ್ಕೂ ಹೋಗಲಾಗುತ್ತಿರಲಿಲ್ಲ. ಈ ಮಧ್ಯೆ ಪತ್ನಿ ಸೀತಾ ಅವರ ಆರೋಗ್ಯವೂ ಸರಿ ಇರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ದಂಪತಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿಕೊಡಲಾಗಿದೆ. ಓರ್ವ ಪುತ್ರ ಜನಾರ್ದನ ಪೂಜಾರಿಗೂ ವಿವಾಹವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ತಂದೆ-ತಾಯಿ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಘಟನೆ ನಡೆಯುವಾಗ ಜನಾರ್ದನರ ಪತ್ನಿ ಮೋಹಿನಿ ಮನೆಯಲ್ಲಿದ್ದರು. ‘‘ಮಾವ ಅನಾರೋಗ್ಯದ ಕಾರಣ ಕೋಣೆಯೊಳಗೇ ಇರುತ್ತಿದ್ದರು. ಕೆಲವೊಮ್ಮೆ ಅತ್ತೆಯೂ ಅಲ್ಲೇ ಇರುತ್ತಿದ್ದರು. ಇಂದು ಮಧ್ಯಾಹ್ನದ ವೇಳೆ ಅಲ್ಲೇ ಇದ್ದರು. ಕೆಲ ಹೊತ್ತಿನ ಬಳಿಕ ಕೋಣೆಯೊಳಗಿಂದ ನರಳಾಟ ಕೇಳಿಸಿತು. ಬಾಗಿಲ ಬಳಿ ಬಂದಾಗ ಒಳಗಡೆಯಿಂದ ಚಿಲಕ ಹಾಕಿತ್ತು. ಕೂಡಲೇ ನಾನು ಅಟ್ಟವನ್ನೇರಿ ನೋಡುವಾಗ ಇಬ್ಬರೂ ನರಳಾಡುತ್ತಿದ್ದರು. ಬಳಿಕ ಪಕ್ಕದ ಮನೆಯವರನ್ನು ಕರೆದು ಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸುವಷ್ಟರಲ್ಲಿ ಮಾವ ಮೃತಪಟ್ಟಿದ್ದರು. ಅತ್ತೆ ಗಂಭೀರ ಸ್ಥಿತಿಯಲ್ಲಿದ್ದರು’’ ಎಂದು ಮೋಹಿನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಲವೊಮ್ಮೆ ಆರೋಗ್ಯ ತೀರಾ ಕೈಕೊಟ್ಟಾಗ ಸಂಜೀವ ಪೂಜಾರಿ ಪತ್ನಿಯೊಂದಿಗೆ ಮಾತನಾಡುತ್ತಾ ಸಾಯುವುದಾದರೆ ನಾವಿಬ್ಬರು ಜೊತೆಯಾಗಿಯೇ ಎಂದು ಹೇಳಿಕೊಳ್ಳುತ್ತಿದ್ದರೆನ್ನಲಾಗಿದ್ದು, ಆದರೆ ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಅವರು ಹೇಳಿದರು.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಎಸ್ಸೈ ನಂದಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.