ಯೇನೆಕಲ್ಲು: ಸರಕಾರಿ - ಖಾಸಗಿ ಬಸ್ ಮುಖಾಮುಖಿ ಢಿಕ್ಕಿ
ಚಾಲಕನಿಗೆ ಗಾಯ
ಸುಬ್ರಹ್ಮಣ್ಯ, ಜು. 16: ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಯೇನೆಕಲ್ಲು ಎಂಬಲ್ಲಿ ಸರಕಾರಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸರಕಾರಿ ಬಸ್ನ ಚಾಲಕ ಗಂಭೀರವಾಗು ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸುಬ್ರಹ್ಮಣ್ಯದಿಂದ ಪಂಜ-ಬೆಳ್ಳಾರೆ-ಸುಳ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಖಾಸಾಗಿ ಬಸ್ ಮತ್ತು ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ನಡುವೆ ಅಪಘಾತ ನಡೆದಿದೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಖಾಸಾಗಿ ಬಸ್ ಚಾಲಕನ ಕಾಲಿಗೆ ಗಾಯವಾಗಿದೆ. ಉಳಿದಂತೆ ಎರಡು ಬಸ್ಗಳ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.
2 ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್
ಎರಡು ಬಸ್ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ತಡೆ ಉಂಟಾಗಿದ್ದು, ಸುಮಾರು 2 ಗಂಟೆಗೂ ಅಧಿಕ ಕಾಲ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯು ಬಂದ್ ಆಗಿತ್ತು.
ಈ ಕಾರಣದಿಂದ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತ್ತು. ಅಲ್ಲದೆ ಢಿಕ್ಕಿಯಾದ ಬಸ್ಗಳನ್ನು ತೆರವುಗೊಳಿಸಲು ಜೆಸಿಬಿ ಮೂಲಕ ಪ್ರಯತ್ನಿಸಲಾಯಿತು. ಸಾರ್ವಜನಿಕರು, ಪ್ರಯಾಣಿಕರು ಮತ್ತು ಸ್ಥಳೀಯರು ಬಸ್ಗಳನ್ನು ತೆರವುಗೊಳಿಸಲು ಸಹಕರಿಸಿದ್ದರು.