ಮಂಗಳೂರು: ಹಜ್ ನೋಂದಣಿ ಪ್ರಕಿಯೆಗೆ ಚಾಲನೆ
ಮಂಗಳೂರು, ಜು.19: ಸರಕಾರಿ ಸ್ವಾಮ್ಯದ ಭಾರತೀಯ ಹಜ್ ಸಮಿತಿ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಪವಿತ್ರ ಹಜ್ ತೆರಳುವವವರ ನೋಂದಣಿ ಪ್ರಕ್ರಿಯೆಗೆ ಬಜ್ಪೆ ಅನ್ಸಾರ್ ಶಾಲೆಯಲ್ಲಿ ಇಂದು ಚಾಲನೆ ದೊರೆಯಿತು.
ಜು.21ರಂದು ಮೊದಲನೇ ತಂಡವಾಗಿ ಮಂಗಳೂರಿನಿಂದ ಹೊರಡುವ 146 ಮಂದಿಯ ನೋಂದಣಿ ಇಂದು ನಡೆಯಿತು. ಪ್ರಥಮವಾಗಿ ಬಂಟ್ವಾಳ ತಾಲೂಕಿನ ಪರಪ್ಪು ಸಮೀಪದ ಕಟ್ಟಪುಣಿ ನಿವಾಸಿ ಇಬ್ರಾಹೀಂ ಎಂಬವರ ನೋಂದಣಿಯೊಂದಿಗೆ ಪ್ರಕ್ರಿಯೆ ಆರಂಭಗೊಂಡಿತು. ನೋಂದಣಿಯು ಸಂಜೆ 4 ಗಂಟೆಯವರೆಗೆ ಇರಲಿದೆ.
ಹಾರೂನ್ ಅಹ್ಸನಿ ದುಆಗೈದರು.
ಈ ಸಂದರ್ಭ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ವೈ.ಮುಹಮ್ಮದ್ ಕುಂಞಿ, ವಕ್ಫ್ ಸಲಹಾ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಪ್ರಮುಖರಾದ ಹಾಜಿ ಹನೀಫ್ ಹಾಜಿ ಬಂದರ್, ಪಿ.ಮಹ್ಮೂದ್ ಹಾಜಿ, ಎಂ.ಎ.ಮಹ್ಮೂದ್ ಹಾಜಿ, ಹಾಜಿ ಸಿ.ಎಚ್. ಉಳ್ಳಾಲ, ಹಾಜಿ ಫಝಲ್ ಪುತ್ತೂರು, ಹಾಜಿ ಶಫೀಕ್ ಕಡಬ, ರಫೀಕ್ ಕೊಡಾಜೆ, ಹನೀಫ್ ಬಜ್ಪೆ, ಮುಹಮ್ಮದ್ ರಿಯಾಝ್ ಬಂದರ್, ಅಹ್ಮದ್ ಬಾವ ಬಜಾಲ್, ಸಲೀಲ್ ಬಜ್ಪೆ, ಮುಹಮ್ಮದ್ ಹನೀಫ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ನೋಂದಣಿ: ಜು.22 ಮತ್ತು 23ರಂದು ಮಂಗಳೂರಿನಿಂದ ಹಜ್ ಯಾತ್ರೆ ತೆರಳಿರುವ ಯಾತ್ರಿಕರು ಕ್ರಮವಾಗಿ ಜು.20 ಮತ್ತು 21ರಂದು ಬಜ್ಪೆ ಅನ್ಸಾರ್ ಶಾಲೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೋಂದಣಿ ನಡೆಯಲಿದೆ. ನೋಂದಣಿಗೆ ಬರುವ ವೇಳೆ ಹಣ ಪಾವತಿಸಿದ ರಶೀದಿ ಹಾಗೂ ಲಗೇಜ್ಗಳನ್ನು ತರಬೇಕು ಎಂದು ಪ್ರಕಟನೆ ತಿಳಿಸಿದೆ.