ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ಸಿಎಫ್ಐ ಆಗ್ರಹ
ಉಡುಪಿ, ಜು.20: ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡುತಿದ್ದ ಬಸ್ಪಾಸ್ ವ್ಯವಸ್ಥೆಯನ್ನು ಈ ವರ್ಷವೂ ಮುಂದುವರಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ಪ್ರದರ್ಶನ ನಡೆಸಿ ಒತ್ತಾಯಿಸಿದೆ. ಅಲ್ಲದೇ ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೂ ಮನವಿಯನ್ನು ಸಲ್ಲಿಸಿದೆ.
ಸಿದ್ದರಾಮಯ್ಯ ಸರಕಾರ ಕಳೆದ ಬಜೆಟ್ನಲ್ಲಿ ಘೋಷಿಸಿದ್ದ ಉಚಿತ ಬಸ್ ಪಾಸ್ನ್ನು 2018-19ನೇ ಸಾಲಿನಲ್ಲೂ ಮುಂದುವರಿಸಬೇಕಿತ್ತು. ಆದರೆ ಪ್ರಸ್ತುತ ಇರುವ ಕುಮಾರಸ್ವಾಮಿ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದೇ ನಿರ್ಲಕ್ಷಿಸಿದೆ ಎಂದು ಸಿಎಫ್ಐ ದೂರಿದೆ.
ಶಾಲಾ-ಕಾಲೇಜುಗಳು ಪ್ರಾರಂಭಗೊಂಡು ತಿಂಗಳುಗಳೇ ಕಳೆದಿದ್ದು, ವಿದ್ಯಾರ್ಥಿಗಳು ಉಚಿತ ಬಸ್ಪಾಸ್ ಯೋಜನೆಗಾಗಿ ಕಾದು ಹಣ ಪಾವತಿಸಿ ಪಾಸ್ ಪಡೆದಿದ್ದಾರೆ. ಇನ್ನೂ ಅನೇಕ ಮಂದಿ ವಿದ್ಯಾರ್ಥಿಗಳು ಉಚಿತ ಬಸ್ಪಾಸ್ಗಾಗಿ ಕಾಯುತಿದ್ದಾರೆ. ಆದರೆ ಸರಕಾರ ಯೋಜನೆಯನ್ನು ಪ್ರಾರಂಭಿಸಿ ಸರಿಯಾಗಿ ಅನುಷ್ಠಾನಗೊಳಿಸದಿರುವುದು ಅದರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.
ಸರಕಾರದ ಈ ನಡೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಖಂಡಿಸಿದ್ದು, ಶೀಘ್ರವೇ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸುವಂತೆ ಒತ್ತಾಯಿಸಿದೆ.