ಪಡುಬಿದ್ರೆ: ಎಸ್ಸೆಸ್ಸೆಫ್ನಿಂದ ಜಾಗೃತಿ ಜಾಥಾ
ಪಡುಬಿದ್ರೆ, ಜು.22: ಎಸ್ಸೆಸ್ಸೆಫ್ ಪಡುಬಿದ್ರೆ ಸೆಕ್ಟರ್ ವತಿಯಿಂದ ‘ನಮ್ಮ ಮಕ್ಕಳು ನಮ್ಮವರಾಗಲು’ ಅಭಿಯಾನದ ಪ್ರಯುಕ್ತ ಶನಿವಾರ ಪಡುಬಿದ್ರೆಯಿಂದ ಹೆಜಮಾಡಿಯವರೆಗೆ ದ್ವಿಚಕ್ರ ವಾಹನ ಜಾಥಾ ನಡೆಯಿತು.
ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ರಕೀಬ್ ಕನ್ನಂಗಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಈ ಮೂಲಕ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿದ್ದು, ಅತ್ಯಾಚಾರ, ಅನಾಚಾರಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಹಾಗೂ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಿ ಜಾಗೃತ ಸಮಾಜ ನಿರ್ಮಾಣವಾಗಲು ನಮ್ಮ ಮಕ್ಕಳು ನಮ್ಮವರಾಗಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಪಡುಬಿದ್ರೆ ಪೇಟೆಯಿಂದ ಆರಂಭಗೊಂಡ ವಾಹನ ಜಾಥಾ ರಾಷ್ಟ್ರೀಯ ಹೆದ್ದಾರಿ ಮೂಲಕ ಹೆಜಮಾಡಿ ತಲುಪಿತು. ಈ ವೇಳೆ ಜಾಗೃತಿ ಜಾಥಾದ ಕರಪತ್ರಗಳನ್ನು ಹಂಚಲಾಯಿತು.
ಎಸ್ಸೆಸ್ಸೆಫ್ ಕಾಪು ಡಿವಿಶನ್ ಉಪಾಧ್ಯಕ್ಷ ಶಾಹುಲ್ ನಈಮಿ ದುಆ ನೆರವೇರಿಸಿದರು. ಪಡುಬಿದ್ರೆ ಗ್ರಾಪಂ ಸದಸ್ಯ ಹಸನ್ ಕಂಚಿನಡ್ಕ, ಕಂಚಿನಡ್ಕ ಮಸೀದಿಯ ಖತೀಬ್ ಲತೀಫ್ ಮದನಿ, ಸದರ್ ಉಸ್ತಾದ್ ಅಶ್ರಫ್ ಸಅದಿ, ರಝಾಕ್ ಕಂಚಿನಡ್ಕ, ಮಾಸ್ಟರ್ ಮುಝಮ್ಮಿಲ್ ಉಪಸ್ಥಿತರಿದ್ದರು.
ಹೆಜಮಾಡಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಶರೀಫ್ ಚಾರ್ಮಾಡಿ, ಜಿಲ್ಲಾ ಉಪಾಧ್ಯಕ್ಷ ಶಬೀರ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.