ಹಮ್ಸಫರ್ ರೈಲಿನ ಉಡುಪಿಯಲ್ಲಿ ನಿಲುಗಡೆ: ಉಡುಪಿ ರೈಲ್ವೆ ಯಾತ್ರಿ ಸಂಘದ ಸಭೆಯಲ್ಲಿ ಒತ್ತಾಯ
ಉಡುಪಿ, ಜು.22: ಹಮ್ ಸಫರ್ ರೈಲಿನ ಉಡುಪಿಯಲ್ಲಿ ನಿಲುಗಡೆ, ಮಂಗಳೂರು ದಕ್ಷಿಣ ಭಾಗದ ವಲಯವನ್ನು ಕೊಂಕಣ್ ರೈಲ್ವೆ ನಿಗಮದ ಜೊತೆ ಸೇರ್ಪಡೆಗೊಳಿಸುವ ಕುರಿತು ಒತ್ತಾಯಿಸುವ ನಿರ್ಣಯವನ್ನು ರವಿವಾರ ಉಡುಪಿಯಲ್ಲಿ ನಡೆದ ಉಡುಪಿ ರೈಲ್ವೆ ಯಾತ್ರಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಂಘದ ಅಧ್ಯಕ್ಷ ಆರ್.ಎಲ್.ಡಾಯಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬೈ ಪಶ್ಚಿಮ ರೈಲ್ವೆಯ ಬಾಂದ್ರಾದಿಂದ ವಸಾಯಿ ಮೂಲಕ ಮಂಗ ಳೂರಿಗೆ ವಾರಕ್ಕೊಮ್ಮೆ ರೈಲು ಮಂಜೂರು ಮಾಡಿಸುವ ಹಾಗೂ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗಳನ್ನು ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಪೂರಕವಾದ ಹೆಜ್ಜೆಳನ್ನು ಇಡಲು ತೀರ್ಮಾನಿಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರನ್ನು ಕೊಂಕಣ ರೈಲ್ವೆ ನಿಗಮದ ನಿಯಮಾನುಸಾರ ಕೊಂಕಣ ರೈಲ್ವೆ ಸಲಹಾ ಸಮಿತಿಗೆ ಕೂಡಲೇ ನೇಮಕ ಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ರೈಲ್ವೆ ಇಲಾಖೆಗೆ ಸಂಬಂಧ ಪಟ್ಟ ಪ್ರಚಲಿತ ಎಲ್ಲ ಸಮಸ್ಯೆಗಳನ್ನು ಶಾಸಕರ ಜೊತೆ ಸಭೆ ನಡೆಸಿ ಅವರ ನೇತೃತ್ವದಲ್ಲಿಯೇ ಮುಂದಿನ ತೀರ್ಮಾನ ತೆಗೆದು ಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ಆರ್.ಮಂಜ, ಕೋಶಾಧಿಕಾರಿ ರಾಮಚಂದ್ರ ಆಚಾರ್ಯ, ನಿರ್ದೇಶಕರುಗಳಾದ ಜಾನ್ ರೆಬೆಲ್ಲೊ, ಸದಾನಂದ ಅಮೀನ್, ಸುಂದರ್ ಕೋಟಿಯನ್, ಶೇಖರ್ ಕೋಟಿಯನ್, ಅಜಿತ್ ಶೆಣೈ, ಜನಾರ್ದನ ಕೋಟಿಯನ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ನಾಥ್ ಮಣಿಪಾಲ ಸ್ವಾಗತಿಸಿದರು. ನಿರ್ದೇಶಕ ಪ್ರಭಾಕರ್ ಆಚಾರ್ಯ ವಂದಿಸಿದರು.