ನಿಧನ: ಡಿವೈಎಫ್ಐ ಮುಂದಾಳು ಶ್ರೀನಿವಾಸ ಹೊಸಬೆಟ್ಟು
ಸುರತ್ಕಲ್, ಜು. 30: ಡಿವೈಎಫ್ಐ ಸುರತ್ಕಲ್ ವಲಯದ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ ಹೊಸಬೆಟ್ಟು (49) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಮೃತರು ತಂದೆ, ತಾಯಿ, ಇಬ್ಬರು ಪುತ್ರಿಯರು, ಓಬ್ಬ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಡಿವೈಎಫ್ಐ, ಸಿಪಿಐಎಂ ಮತ್ತು ಸಿಐಟಿಯು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಜನರಿಗೆ ವಿವಿಧ ಸವಲತ್ತು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದರು. ಸುರತ್ಕಲ್ ಮಾರುಕಟ್ಟೆ ಕೆಡವಿ ಹಾಕಿರುವುದರ ವಿರುದ್ಧ ಹೋರಾಟ, ಎಂ.ಆರ್.ಪಿ.ಎಲ್ ರಸ್ತೆ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ನಗರ ಉಪಾದ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ವಲಯ ಅಧ್ಯಕ್ಷ ಅಜ್ಮಲ್ ಅಹಮದ್ ಅವರು ಅಂತಿಮ ದರ್ಶನ ಪಡೆದರು. ಶ್ರೀನಿವಾಸ ಹೊಸಬೆಟ್ಟು ಅವರ ನಿಧನಕ್ಕೆ ಡಿವೈಎಫ್ಐ ಜಿಲ್ಲಾ ಸಮಿತಿ, ಸುರತ್ಕಲ್ ಕಟ್ಟಡ ಕಾರ್ಮಿಕರ ಸಂಘ ಸಂತಾಪ ವ್ಯಕ್ತಪಡಿಸಿದೆ.