ನಿಧನ: ಸಾಣೂರು ಕೇಶವ ಆಚಾರ್ಯ
ಮೂಡುಬಿದಿರೆ, ಆ. 2: ಕೈಗಾರಿಕೋದ್ಯಮಿ, ಸಮಾಜ ಸೇವಕ, ಸಾಣೂರು ಕೇಶವ ಆಚಾರ್ಯ (71) ಗುರುವಾರ ಸಾಣೂರಿನಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ನಾಲ್ಕು ಮಂದಿ ಪುತ್ರರು, ಪುತ್ರಿ ಇದ್ದಾರೆ.
ವೃತ್ತಿಯಲ್ಲಿ ಕೃಷಿಕ ಹಾಗೂ ಕಮ್ಮಾರರಾಗಿದ್ದ ಅವರು ಸಾಂಪ್ರದಾಯಿಕ ಮರದ ಉಳುಮೆಯ ನೇಗಿಲಿಗೆ ಪರ್ಯಾಯವಾಗಿ ಕಬ್ಬಿಣದ ನೇಗಿಲನ್ನು ಆವಿಷ್ಕರಿಸಿದ್ದರು. ಧೂಮಾವತಿ ನೇಗಿಲು ಇಂಡಸ್ಟ್ರೀಸ್ ಎಂಬ ಉದ್ಯಮವನ್ನು ಸ್ಥಾಪಿಸಿದ್ದು ಪ್ರಸ್ತುತ ಆ ಉದ್ಯಮವನ್ನು ಆಧುನಿಕ ಸ್ವರೂಪದೊಂದಿಗೆ ವಿಸ್ತರಿಸಿ ಹಲವಾರು ಮಂದಿಗೆ ಉದ್ಯೋಗದಾತರಾಗಿದ್ದರು.
ಕೃಷಿ ಕೆಲಸಗಳಿಗೆ ಅನುಕೂಲವಾಗುವಂತಹ ಕಬ್ಬಿಣದ ಸಣ್ಣ ಹಾರೆ, ತೆಂಗಿನಕಾಯಿ ಸುಳಿಯುವ ಸುಲೆಂಗಿ, ಕೃಷಿ ಕಳೆ ತೆಗೆಯುವ ಉಪಕರಣಗಳ ಸಹಿತ ಸುಮಾರು 40ರಷ್ಟು ಕೃಷಿ ಉಪಕರಣಗಳನ್ನು ಆವಿಷ್ಕರಿಸಿ ಉತ್ಪಾದಿಸುತ್ತಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಪ್ರಮುಖ ವಿತರಕರೂ ಆಗಿದ್ದರು.
ಸಾಂಪ್ರದಾಯಿಕ ನಾಟಿ ವೈದ್ಯ ಪದ್ಧತಿಯ ಮೂಲಕ ಔಷಧಗಳನ್ನು ಅವರು ಸ್ಥಳೀಯವಾಗಿ ನೀಡುತ್ತಿದ್ದರು. ಸಾಣೂರು ಗ್ರಾಮ ಪಂಚಾಯತ್ನ ಪ್ರಥಮ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಸಾಣೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ, ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದರು. ಕೊಡುಗೈ ದಾನಿಯಾಗಿದ್ದರು. ಇವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದ್ದವು.