ಮಂಗಳೂರು: ಇನ್ ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಚಾಲನೆ
ಮಂಗಳೂರು, ಆ.8: ಇನ್ಲ್ಯಾಂಡ್ ಗ್ರೂಪ್ ವತಿಯಿಂದ ನಗರದ ನವಭಾರತ ಸರ್ಕಲ್ನಲ್ಲಿರುವ ಇನ್ಲ್ಯಾಂಡ್ ಆರ್ನೇಟ್ ಸಂಕೀರ್ಣದ ಸಭಾಂಗಣದಲ್ಲಿ ಆಯೋಜಿಸಲಾಗಿರುವ 19 ದಿನಗಳ ‘ಇನ್ ಲ್ಯಾಂಡ್ ಪ್ರಾಪರ್ಟಿ ಮೇಳ’ಕ್ಕೆ ಇಂದು ಚಾಲನೆ ದೊರೆತಿದೆ.
ಇಂದಿನಿಂದ ಆ.26ರವರೆಗೆ ನಡೆಯುವ ಮೇಳಕ್ಕೆ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಹಾಗೂ ದಾಯ್ಜಿ ವರ್ಲ್ಡ್ನ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಯೆನೆಪೊಯ ಅಬ್ದುಲ್ಲಾ ಕುಂಞಿ, ಮಂಗಳೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ತಮ್ಮದೆ ಆದ ಕಾರ್ಯಶೈಲಿಯ ಮೂಲಕ ಹೆಸರು ಮಾಡಿರುವ ಇನ್ಲ್ಯಾಂಡ್ ಗ್ರೂಪ್ ಅನಿವಾಸಿ ಭಾರತೀಯರು ಮರಳಿ ಊರಿನತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಮೇಳವನ್ನು ಆಯೋಜಿಸಿರುವುದು ಸಕಾಲಿಕವಾಗಿದೆ. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದ ಮೂಲಕ ಇನ್ಲ್ಯಾಂಡ್ ಸಂಸ್ಥೆ ಉತ್ತಮ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ವಾಲ್ಟರ್ ನಂದಳಿಕೆ ಮಾತನಾಡಿ, ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಎತ್ತರದ ಕಟ್ಟಡ ನಿರ್ಮಾಣ ಮಾಡುವ ಮೂಲಕ ದಾಖಲೆ ಬರೆದ ಸಂಸ್ಥೆಯಾಗಿದೆ ಇನ್ಲ್ಯಾಂಡ್ ಬಿಲ್ಡರ್ಸ್. ಆಕರ್ಷಕ ಹಾಗೂ ಗುಣಮಟ್ಟದ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಈ ಸಂಸ್ಥೆ ಇನ್ನಷ್ಟ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಎಂ.ಪಿ.ಶೆಣೈ ಮಾತನಾಡಿ, ಇನ್ಲ್ಯಾಂಡ್ ಸಂಸ್ಥೆ ಉದ್ಯಮ ಕ್ಷೇತ್ರದಲ್ಲಿ ಗ್ರಾಹಕರಿಗೆ ನ್ಯಾಯಬದ್ಧ ಸೌಲಭ್ಯವನ್ನು ಒದಗಿಸಿ ಅವರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಇನ್ಲ್ಯಾಂಡ್ ಬಿಲ್ಡರ್ಸ್ ಮತ್ತು ಡೆವಲಜರ್ ಸಂಸ್ಥೆಗಳ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ. ರಿಯಲ್ಟ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಭವಿಷ್ಯದ ದೃಷ್ಟಿಯಿಂದ ಎಷ್ಟು ಲಾಭದಾಯಕ, ಈ ಹೂಡಿಕೆಯನ್ನು ಯಾವಾಗ ಎಲ್ಲಿ ಮಾಡಬೇಕು ಎನ್ನುವ ಮಾಹಿತಿ ಕೊರತೆಯ ಕಾರಣ ಈ ಕ್ಷೇತ್ರದಲ್ಲಿ ಸಾಕಷ್ಟು ಜನರು ದೂರ ಉಳಿದಿದ್ದಾರೆ. ಆದ್ದರಿಂದ ಈ ಬಗ್ಗೆ ಮಾಹಿತಿ ಒದಗಿಸುವ ದೃಷ್ಟಿಯಿಂದ ಈ ಮೇಳ ಹಮ್ಮಿಕೊಂಡಿರುವುದಾಗಿ ಹೇಳಿದರು.
ಇನ್ಲ್ಯಾಂಡ್ ಬಿಲ್ಡರ್ಸ್ ಮತ್ತು ಡೆವಲಪರ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಉಲ್ಲಾಸ್ ಕದ್ರಿ ಮಾತನಾಡಿ, ಭೂ ವ್ಯವಹಾರ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಲಾಭಗಳ ಬಗ್ಗೆ ವಿವರಿಸಿದರು.
ಇನ್ಲ್ಯಾಂಡ್ ಸಂಸ್ಥೆಯ ವಿವಿಧ ಯೋಜನೆಗಳ ವಿವರಗಳನ್ನು ನೀಡಿದರು. ಕಾರ್ಪೊರೇಶನ್ ಬ್ಯಾಂಕ್ನ ಉಪ ಮಹಾಪ್ರಬಂಧಕ ಎ.ಕೆ.ವಿನೋದ್, ಇನ್ಲ್ಯಾಂಡ್ ಬಿಲ್ಡರ್ಸ್ ಮತ್ತು ಡೆವಲಪರ್ ಸಂಸ್ಥೆಯ ನಿರ್ದೇಶಕ ಮೆಹ್ರಾಜ್ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು. ಸುನಿಲ್ ಸ್ವಾಗತಿಸಿದರು.