ಗಾಂಜಾ ಮಾರಾಟ: ಇಬ್ಬರ ಬಂಧನ; ಸೊತ್ತು ವಶ
ಮಂಗಳೂರು, ಆ.18: ಸುಳ್ಯ ತಾಲೂಕಿನ ಸುಳ್ಯ-ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಳ್ಯ ತಾಲೂಕಿನ ಸುಳ್ಯ-ಕಸಬಾ ಗ್ರಾಮದ ನಿವಾಸಿ ತೀರ್ಥಪ್ರಸಾದ್ (25), ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ನಿವಾಸಿ ವಿನಾಯಕ (30) ಬಂಧಿತರು.
ಆ.18ರಂದು ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಬೈಕ್ ಹಾಗೂ ಆಟೊರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗು ತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಬಳಿಕ ಬೆನ್ನಟ್ಟಿದ ಪೊಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳಿಂದ 1 ಕೆ.ಜಿ. 394 ಗ್ರಾಂ ಗಾಂಜಾ, ಗಾಂಜಾ ಸಾಗಾಟ ಮತ್ತು ಮಾರಾಟ ಬಳಸಿದ್ದ ಬೈಕ್ ಮತ್ತು ಆಟೊರಿಕ್ಷಾ ಸೇರಿ ಒಟ್ಟು 2,42,190 ರೂ. ವೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲವು ಪ್ರಕರಣ ದಾಖಲು: ಈ ಪೈಕಿ ತೀರ್ಥ ಪ್ರಸಾದ್ ವಿರುದ್ಧ ಸುಳ್ಯ ಠಾಣೆಯಲ್ಲಿ 2 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ವಿನಾಯಕ ಎಂಬಾತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ 1 ಗಾಂಜಾ ಪ್ರಕರಣ ದಾಖಲಾಗಿದೆ.
ಬಳಿಕ ಪ್ರಕರಣವನ್ನು ಸುಳ್ಯ ಪೊಲೀಸ್ ಠಾಣೆಗೆ ಸೂಕ್ರ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬಿ.ಆರ್. ರವಿಕಾಂತೇಗೌಡ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಜಿತ್ ಸೂಚನೆಯಂತೆ ಡಿಸಿಐಬಿ ಪೊಲೀಸ್ ನಿರೀಕ್ಷಕ ಸುನೀಲ್ ವೈ. ನಾಯಕ್ ನೇತೃತ್ವದ ತಂಡದಲ್ಲಿ ಸಿಬ್ಬಂದಿ ಲಕ್ಷ್ಮಣ ಕೆ.ಜಿ, ನಾರಾಯಣ, ಉದಯ ಗೌಡ, ಪ್ರವೀಣ್ ಎಂ., ತಾರಾನಾಥ್ ಎಸ್., ಪ್ರವೀಣ್ ರೈ, ಶೋನ್ಶಾ ಮತ್ತು ಸುರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.