ಬಂಟ್ವಾಳ ಪುರಸಭೆ ಅತಂತ್ರ ಫಲಿತಾಂಶ: ಬಹುಮತ ಬಾರದಿದ್ದರೆ ವಿಪಕ್ಷದಲ್ಲಿ ಕೂರಲು ಸಿದ್ಧ; ಕಾಂಗ್ರೆಸ್-ಬಿಜೆಪಿ
ಸಮಾನ ಮನಸ್ಕ ಜನಪ್ರತಿನಿಧಿಗಳೊಂದಿಗೆ ಆಡಳಿತ ನಡೆಸುತ್ತೇವೆ: ಎಸ್ಡಿಪಿಐ
ಬಂಟ್ವಾಳ, ಆ. 3: ಕಾಂಗ್ರೆಸ್ ಮತ್ತು ಬಿಜೆಪಿ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಆಡಳಿತ ನಡೆಸಲು ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ನಲ್ಲಿ ಇತ್ತೀಚೆಗೆ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಬಾರದೇ ಇದ್ದರೆ ವಿಪಕ್ಷದಲ್ಲಿ ಕೂರಲು ಸಿದ್ಧ ಎಂದರೆ ಎಸ್ಡಿಪಿಐ ಸಮಾನ ಮನಸ್ಕ ಜನಪ್ರತಿನಿಧಿಗಳೊಂದಿಗೆ ಆಡಳಿತ ನಡೆಸುತ್ತೇವೆ ಎಂದು ಹೇಳಿತ್ತು.
"ಕೋಮುವಾದಿ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ-ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ಮತ್ತೊಂದೆಡೆ ಮಾಜಿ ಸಚಿವ ರಮಾನಾಥ ರೈ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಆದರೆ ಶುಕ್ರವಾರ ನಡೆದ ಬಂಟ್ವಾಳ ಪುರಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಅತಂತ್ರ ಫಲಿತಾಂಶ ಕಂಡುಬಂದಿದೆ. ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್ಡಿಪಿಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು 14 ಸ್ಥಾನಗಳ ಆವಶ್ಯವಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಬಿಜೆಪಿ ಅಧಿಕಾರಕ್ಕೇರಬೇಕಾದರೆ, ಎಂಎಲ್ಎ ಮತ್ತು ಎಂಪಿ ಅವರ ಮತಗಳನ್ನು ಸೇರಿಸಿ ಬಿಜೆಪಿಗೆ 13 ಆಗುತ್ತವೆ. ಕಾಂಗ್ರೆಸ್ 12 ಮತ್ತು ಎಸ್ಡಿಪಿಐ 4 ಸ್ಥಾನ ಪಡೆಯುತ್ತದೆ. ಆದರೂ ಬಹುಮತ ಗಳಿಸಲು ಎಸ್ಡಿಪಿಐ ಕೈಗೊಳ್ಳುವ ನಿರ್ಧಾರ ನಿರ್ಣಾಯಕ. ಹೀಗಾಗಿ ಅಧಿಕಾರ ಗದ್ದುಗೆಗೆ ಎಸ್ಡಿಪಿಐ ತಾನೇ ಏರುತ್ತಾ, ಅಥವಾ ಕಿಂಗ್ ಮೇಕರ್ ಆಗುತ್ತಾ ಎಂಬುದು ಕುತೂಹಲಕಾರಿಯಾಗಿದೆ.