ಶಂಕರ್ಪೂಜಾರಿ ಬಿಡುಗಡೆಗೆ ಪ್ರಯತ್ನ: ಅನ್ಸಾರ್ ಅಹ್ಮದ್
ಉಡುಪಿ, ಸೆ.4: ಕುವೈತ್ ಗೆ ನಿಷೇಧಿತ ಮಾತ್ರೆಯನ್ನು ತೆಗೆದುಕೊಂಡು ಹೋದ ಕಾರಣಕ್ಕೆ ಜೈಲುಪಾಲಾಗಿರುವ ಬಸ್ರೂರಿನ ಶಂಕರ ಪೂಜಾರಿ ಅವರನ್ನು ಒಂದು ತಿಂಗಳೊಳಗೆ ಬಿಡುಗಡೆಗೊಳಿಸಿ ವಾಪಾಸ್ಸು ಕರೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಈ ವಿಚಾರ ದಲ್ಲಿ ದುಬೈಯ ವಕೀಲರನ್ನು ನೇಮಿಸಿ ಕಾನೂನು ಮೂಲಕ ಹೋರಾಟ ನಡೆ ಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಶಂಕರ ಪೂಜಾರಿ ಕಾನೂನು ಬಾಹಿರ ಕೃತ್ಯದಿಂದ ಬಂಧನಕ್ಕೆ ಒಳಗಾಗಿರುವುದರಿಂದ ಇದರಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ ಎಂದರು.
ಶಂಕರ ಪೂಜಾರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿ ಅವರ ಪತ್ನಿ ಜ್ಯೋತಿಯವರಿಂದ ಕೆಲವು ವ್ಯಕ್ತಿಗಳು ಸಾವಿರಾರು ರೂ. ಹಣ ಪಡೆದು ಕೊಂಡಿದ್ದು, ಇದರಲ್ಲಿ ಮೋಸ ಆಗಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಶಂಕರ ಪೂಜಾರಿಯನ್ನು ಕರೆ ತರುವ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂಬ ಮುಬಾರಕ್ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಂಕರ ಪೂಜಾರಿ ಪತ್ನಿ ಜ್ಯೋತಿ ಉಪಸ್ಥಿತರಿದ್ದರು.