ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿದ ಕಾರು; ಓರ್ವ ಮೃತ್ಯು
ಕಾಸರಗೋಡು,ಸೆ.6: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕುತ್ತಿಕೋಲ್ ಸಮೀಪದ ಎರಿಂಞಪುಯದಲ್ಲಿ ನಡೆದಿದೆ.
ಮೃತಪಟ್ಟವರನ್ನು ಎರಿಂಞಪುಯದ ಇ. ಟಿ ಗೋಪಿ ಕೃಷ್ಣನ್ (60 ) ಎಂದು ಗುರುತಿಸಲಾಗಿದೆ.
ಎರಿಂಞಪುಯದ ಮನೆಯಿಂದ ಬೋವಿಕ್ಕಾನಕ್ಕೆ ಬರುತ್ತಿದ್ದಾಗ ಬೀಟಿಯಡ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮನೆ ಮೇಲೆ ಬಿದ್ದಿದೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಗೋಪಿ ಕೃಷ್ಣನ್ ಮೃತಪಟ್ಟಿದ್ದಾರೆ. ದಾರಿ ಮಧ್ಯೆ ಕಾರು ಹತ್ತಿದ್ದ ಸಜೀನಾ ಎಂಬಾಕೆ ಗಾಯಗೊಂಡಿದ್ದಾರೆ.
ಸ್ಥಳೀಯರು ಹಾಗೂ ಆದೂರು ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ತಲುಪಿಸಿದರೂ ಗೋಪಿಕೃಷ್ಣನ್ ಆಗಲೇ ಮೃತಪಟ್ಟಿದ್ದರು. ಹೃದ್ರೋಗಿಯಾಗಿದ್ದ ಗೋಪಿಕೃಷ್ಣ ರವರಿಗೆ ಕಾರು ಚಲಾಯಿಸುತ್ತಿದ್ದಾಗ ಹೃದಯಾಘಾತ ಉಂಟಾಗಿ ಈ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಗೋಪಿ ಕೃಷ್ಣನ್ ಕೃಷಿಕರಾಗಿದ್ದು, ಮುಳುಗು ತಜ್ಞರಾಗಿಯೂ ಹೆಸರು ಪಡೆದಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.