ಅನೈತಿಕ ಸಂಬಂಧದ ಆರೋಪ: ಪತ್ನಿಯ ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪತಿ
ಚಿಕ್ಕಮಗಳೂರು, ಸೆ.10: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲೆಗೈದು ಆಕೆಯ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಶರಣಾದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಶಿವನಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಶಿವನಿ ಗ್ರಾಮದ ನಿವಾಸಿ ಸತೀಶ್ ಕೊಲೆ ಆರೋಪಿಯಾಗಿದ್ದಾನೆ. ಈತನ ಪತ್ನಿ ರೂಪಾ ಕೊಲೆಯಾದ ಮಹಿಳೆ. ಮಹಿಳೆಗಿದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ದುಡಿಯುತ್ತಿದ್ದ ಸತೀಶ್ ಇತ್ತೀಚೆಗೆ ಶಿವನಿಯಲ್ಲೇ ಮಾಂಸದ ಅಂಗಡಿ ನಡೆಸುತ್ತಿದ್ದನು. 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ರೂಪಾ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಸಾಕಷ್ಟು ಬಾರಿ ದಂಪತಿ ನಡುವೆ ಜಗಳ ನಡೆದು ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ಸಂಬಂಧಿಕರು ರಾಜಿ ಮಾಡಿಸಿ ಮತ್ತೆ ದಂಪತಿ ಒಂದಾಗುವಂತೆ ಮಾಡಿದ್ದರೆಂದು ತಿಳಿದು ಬಂದಿದೆ.
ರವಿವಾರ ರಾತ್ರಿ ಸತೀಶ್ ಅಂಗಡಿಯಿಂದ ಮನೆಗೆ ಬಂದಾಗ ಅನ್ಯ ಪುರುಷನ ಜೊತೆ ರೂಪಾ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರೆನ್ನಲಾಗಿದೆ. ಈ ವೇಳೆ ಕೋಪಗೊಂಡ ಸತೀಶ್ ಅಪರಿಚಿತನ ಮೇಲೆ ಕತ್ತಿ ಬೀಸಿದರೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಇದೇ ರೋಷದಲ್ಲಿ ಸತೀಶ್ ಪತ್ನಿ ರೂಪಾರ ತಲೆಯನ್ನು ಕತ್ತಿಯಿಂದ ಕಡಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಆರೋಪಿ ಸತೀಶ್ ರೂಪಾ ಅವರ ತಲೆಯನ್ನು ಚೀಲವೊಂದರಲ್ಲಿ ಹಾಕಿಕೊಂಡು ತನ್ನ ಬೈಕ್ನಲ್ಲೇ 20 ಕಿ.ಮೀ. ದೂರದ ಅಜ್ಜಂಪುರ ಪೊಲೀಸ್ ಠಾಣೆಗೆ ಕೊಂಡೊಯ್ದು ಪೊಲೀಸರಿಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.