ಕ್ಷೇತ್ರ ಕಾರ್ಯದಿಂದ ವಿದ್ಯಾರ್ಥಿಗಳಿಗೆ ಬದುಕಿನ ಅನುಭವ: ಡಾ.ಶೋಭಾದೇವಿ
ಮಂಗಳೂರು, ಸೆ.14: ವಿದ್ಯಾರ್ಥಿಗಳು ಸಮಾಜ ಕಾರ್ಯಕ್ಕೆ ಸಂಬಂಧಿಸಿ ತರಗತಿಗಳಲ್ಲಿ ಕಲಿತ ಸಿದ್ಧಾಂತಗಳನ್ನು ಕ್ಷೇತ್ರ ಕಾರ್ಯದಲ್ಲಿ ಅಳವಡಿಸಿದರೆ ಬದುಕಿನಲ್ಲಿ ಹೊಸ ಅನುಭವ ಪಡೆಯಲು ಸಾಧ್ಯವಿದೆ ಎಂದು ಪಡಿ ಸಂಸ್ಥೆಯ ಅಧ್ಯಕ್ಷೆ ಡಾ. ಶೋಭಾದೇವಿ ಹೇಳಿದರು.
ಪಡಿ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದಲ್ಲಿ ನಡೆದ ‘ಸಮಾಜಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನದ ಪಾತ್ರ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಂಜಿನ್ ಅಂತಾರಾಷ್ಟ್ರೀಯ ಲಿ.ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರೊನಾಲ್ಡ್ ಮಸ್ಕರೇನಸ್ ಮಾತನಾಡಿ ಸಮಾಜಕಾರ್ಯದಲ್ಲಿ ಕೌಶಲ್ಯಗಳನ್ನು ಕಲಿತುಕೊಂಡು ಕ್ಷೇತ್ರಕಾರ್ಯದ ಅನುಭವವನ್ನು ಗಳಿಸಬೇಕು ಎಂದು ತಿಳಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ)ದ ಅಧ್ಯಕ್ಷೆ ಪ್ರೇಮಿ ಫೆರ್ನಾಂಡಿಸ್ ಮಾತನಾಡಿ ಸಮಾಜ ಕಾರ್ಯದಲ್ಲಿ ವಿದ್ಯಾರ್ಥಿಗಳ ಜನರ ಬದುಕನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ಷೇತ್ರವನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಮಾತಾನಾಡಿ ಸಮಾಜಕಾರ್ಯ ಶಿಕ್ಷಣವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದಂತೆ ಶೈಕ್ಷಣಿಕವಾಗಿ ಕ್ಷೇತ್ರ ಕಾರ್ಯದ ಬಗ್ಗೆ ಹೆಚ್ಚು ಚರ್ಚೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಡಿ-ವೆಲೊರೆಡ್ನ ಮಗುಸ್ನೇಹಿ ಸಮಾಜ ನಿರ್ಮಾಣ ಯೋಜನೆಯ ಕಾರ್ಯಕ್ರಮಗಳಿಗೆ ಹಣಕಾಸಿನ ಆವಶ್ಯಕತೆಗಾಗಿ ಕೂಪನ್ನ್ನು ಅನಾವರಣಗೊಳಿಸಲಾಯಿತು.
ಅಲ್ಲದೆ ಪಡಿ ಸಂಸ್ಥೆಯಲ್ಲಿ ಒಂದು ವರ್ಷದ ಕ್ಷೇತ್ರ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಉಡುಪಿ ಜಿಲ್ಲಾ ಸಂಯೋಜಕ ವಿವೇಕ್ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ಸ್ಟೀವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.