ಕುಂದಾಪುರದ ಹೋಮ್ಗಾರ್ಡ್ ನಾಪತ್ತೆ: ಬೈಕ್, ಮೊಬೈಲ್ ಪತ್ತೆ
ಕುಂದಾಪುರ, ಸೆ.15: ಕುಂದಾಪುರದ ಹೋಮ್ಗಾರ್ಡ್ ಸಿಬ್ಬಂದಿಯೊಬ್ಬರು ಇಂದು ಬೆಳಗಿನ ಜಾವ ನಾಪತ್ತೆಯಾಗಿದ್ದು, ಅವರ ಬೈಕ್, ಚಪ್ಪಲಿ, ಮೊಬೈಲ್ ಹಾಗೂ ಹೆಲ್ಮೆಟ್ ಕೋಟೇಶ್ವರದ ಸ್ಮಶಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್ ಬಳಿ ಪತ್ತೆಯಾಗಿದೆ.
ನಾಪತ್ತೆಯಾದವರನ್ನು ಕುಂಬಾಶಿ ಗ್ರಾಮದ ಕೊರವಾಡಿಯ ನಾರಾಯಣ ಮರಕಾಲ ಎಂಬವರ ಮಗ ಚಂದ್ರಕಾಂತ್ (35) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ವೃತ್ತಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಕುಂದಾಪುರದಲ್ಲಿ ಕರ್ತವ್ಯ ನಿರ್ಹಿಸುತ್ತಿದ್ದರು.
ಚಂದ್ರಕಾಂತ್ ಇಂದು ಬೆಳಗಿನ ಜಾವ 3ಗಂಟೆಗೆ ಮನೆಯಿಂದ ಬೈಕ್ನಲ್ಲಿ ಹೊರಟಿದ್ದು, ಬೆಳಗಿನ ಜಾವ 4.30ರ ಸುಮಾರಿಗೆ ಅವರ ಬೈಕ್ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಬಳಿ ಅಡ್ಡ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಅವರ ಮೊಬೈಲ್, ಚಪ್ಪಲಿ ಹಾಗೂ ಹೆಲ್ಮೇಟ್ ಕಂಡುಬಂದಿದೆ.
ಸ್ಥಳಕ್ಕೆ ಆಗಮಿಸಿರುವ ಕುಂದಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಈವರೆಗೆ ಚಂದ್ರಕಾಂತ್ ಪತ್ತೆಯಾಗಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.